ಪತಿಯ ವಿರುದ್ಧ ಆ್ಯಸಿಡ್ ದಾಳಿ, ಜೀವ ಬೆದರಿಕೆ ದೂರು ದಾಖಲಿಸಿದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್

Update: 2021-06-04 16:18 GMT
ವರ್ತಿಕಾ ಕಟಿಯಾರ್

ಬೆಂಗಳೂರು, ಜೂ.4: ಕೌಟುಂಬಿಕ ಕಲಹದಿಂದ ದೂರವಾಗಿರುವ ಐಪಿಎಸ್ ಅಧಿಕಾರಿ ವರ್ಟಿಕಾ ಕಟಿಯಾರ್ ಹಾಗೂ ಐಎಫ್‍ಎಸ್ ಅಧಿಕಾರಿ ನಿತಿನ್ ಸುಭಾಷ್ ನಡುವಿನ ಕಾನೂನು ಹೋರಾಟ ಮುಂದುವರೆದಿದ್ದು, ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ಪತ್ನಿ ವಿರುದ್ಧ ಪತಿ ಕಾನೂನು ಹೋರಾಟ ನಡೆಸಿದ್ದರೆ, ಇತ್ತ ಪತ್ನಿಯು ಕೂಡ ಪತಿ ವಿರುದ್ಧ ಬೆದರಿಕೆ ಹಾಗೂ ಕಿರುಕುಳ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರದ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ಡಿಸಿಪಿ ಆಗಿರುವ ವರ್ಟಿಕಾ ಕಟಿಯಾರ್, ತಮ್ಮ ಗಂಡ ನಿತಿನ್ ಸುಭಾಷ್ ವಿರುದ್ಧ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆ ಈ ದಂಪತಿ ದೂರವಾಗಿದ್ದರು. ವರ್ಟಿಕಾ ಕಟಿಯಾರ್ ಕಳೆದ ಫೆಬ್ರವರಿಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. ಪ್ರಕರಣ ಹೊಸದಿಲ್ಲಿಯ ಪೊಲೀಸರಿಗೆ ಹಸ್ತಾಂತರವಾಗಿತ್ತು. ಆರೋಪವನ್ನು ನಿತಿನ್ ಅಲ್ಲಗಳೆದಿದ್ದರು. ಈ ನಡುವೆ ಮಗು ನೋಡಲು ಬಿಡುತ್ತಿಲ್ಲ ಎಂದು ಪತಿ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಮೊರೆ ಹೋಗಿದ್ದರು. ಪ್ರಾಥಮಿಕ ವಿಚಾರಣೆ ನಡೆಸಿದ ಆಯೋಗ, ಡಿಜಿಪಿ ಪ್ರವೀಣ್ ಸೂದ್‍ಗೆ ವರ್ಟಿಕಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಗಂಡನ ವಿರುದ್ಧ ಹೆಂಡತಿ ಮತ್ತೊಂದು ದೂರು ನೀಡಿದ್ದಾರೆ.

ವಾಟ್ಸ್ ಆ್ಯಪ್‍ನಲ್ಲಿ ಕಳೆದ ಮೇ 28ರಂದು ಆ್ಯಸಿಡ್ ಹಾಕುವುದಾಗಿ ಹೇಳಿದ್ದಾರೆ. ಅಲ್ಲದೆ ನನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ನಾನು ಹಾಕಿರುವ ಕೇಸ್‍ಗಳನ್ನು ವಾಪಸ್ ಪಡೆಯಬೇಕೆಂದು ಒತ್ತಡ ಹೇರಿದ್ದಾರೆ. ಮೇ 29ರಂದು ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಅನಧಿಕೃತವಾಗಿ ಬೆಂಗಳೂರಿನ ನನ್ನ ಕಚೇರಿಗೆ ಆಗಮಿಸಿದ್ದಾರೆ. ಈ ಮೂಲಕ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುವುದಕ್ಕೆ ಸಂಚು ರೂಪಿಸಿದ್ದಾರೆ. ಅದೇ ದಿನ ರಾತ್ರಿ ಪೋಷಕರಿಗೆ ಕರೆ ಮಾಡಿ ಮನೆ ವಿಳಾಸ ತಿಳಿಸುವಂತೆ ಒತ್ತಡ ಹೇರಿದ್ದಾರೆ ಎಂದು ಪತಿ ನಿತಿನ್ ವಿರುದ್ಧ ವರ್ಟಿಕಾ ದೂರು ನೀಡಿದ್ದಾರೆ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News