'ಸಾರಿಗೆ ಸುರಕ್ಷಾ' ಬಸ್ ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

Update: 2021-06-04 17:46 GMT

ಬೆಳಗಾವಿ, ಜೂ. 4: `ಸಾರಿಗೆ ಸುರಕ್ಷಾ' ಎಂಬ ಹೆಸರಿನ ಸಂಚಾರಿ ಐಸಿಯು ಆ್ಯಂಬುಲೆನ್ಸ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶುಕ್ರವಾರ ಇಲ್ಲಿನ ಸುವರ್ಣ ವಿಧಾನಸೌಧ ಆವರಣದಲ್ಲಿ ಲೋಕಾರ್ಪಣೆ ಮಾಡಿದರು.

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ 2ನೆ ಅಲೆಯು ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಕರಸಾ ಸಂಸ್ಥೆಯು `ಸಾರಿಗೆ ಸುರಕ್ಷಾ' ಹೆಸರಿನ ಆ್ಯಂಬುಲೆನ್ಸ್ ಪ್ರಾರಂಭಿಸಿದೆ. ಈ ಆ್ಯಂಬುಲೆನ್ಸ್ ನಿರ್ಮಾಣಕ್ಕೆ ಒಟ್ಟು ರೂ. 7.88ಲಕ್ಷ ರೂ. ವೆಚ್ಚ ತಗುಲಿದ್ದು, ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ನಿರ್ಮಿಸಲಾಗಿದೆ.

ಆ್ಯಂಬುಲೆನ್ಸ್ ನಲ್ಲಿ ವಿಶೇಷ ಚಿಕಿತ್ಸಾ ವ್ಯವಸ್ಥೆಗಳು: `ಸಾರಿಗೆ ಸುರಕ್ಷಾ' ವಾಹನದಲ್ಲಿ ನಾಲ್ಕು ಹಾಸಿಗೆಗಳಿದ್ದು, ಐಸಿಯು ಸೌಲಭ್ಯ ಹೊಂದಿವೆ. ಪ್ರತಿಯೊಂದು ಬೆಡ್‍ಗೂ ಆಕ್ಸಿಜನ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಬೆಡ್ ಹಾಗೂ ಕಿಟಕಿಗಳಿಗೆ ಕರ್ಟನ್ ಅಳವಡಿಸಲಾಗಿದೆ. ಅಲ್ಲದೆ, ವಾಹನದಲ್ಲಿರುವ ಪ್ರತಿಯೊಂದು ಬೆಡ್‍ಗಳಿಗೆ ಹಾಗೂ ವಾಹನದೊಳಗೆ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಾಹನದಲ್ಲಿರುವ 4 ಬೆಡ್‍ಗಳಿಗೂ ಫ್ಯಾನ್ ಅಳವಡಿಸಲಾಗಿದೆ.

ಪ್ರತಿ ಬೆಡ್‍ಗಳ ನಡುವೆ ಔಷಧಿ/ವಸ್ತುಗಳ ಸ್ಟೋರ್ ಸ್ಟಾಂಡ್ ಅಳವಡಿಸಲಾಗಿದ್ದು, ಐವಿ ವ್ಯವಸ್ಥೆ, ತುರ್ತು ಔಷಧಿ ವ್ಯವಸ್ಥೆ ಹಾಗೂ ಥರ್ಮಾಮೀಟರ್ ಮತ್ತು ಆಕ್ಸಿಮೀಟರ್ ಒದಗಿಸಲಾಗಿದೆ. ಡ್ಯೂಟಿ ಡಾಕ್ಟರ್/ನರ್ಸ್‍ಗಳಿಗೆ ಪ್ರತ್ಯೇಕ ಕೌಂಟರ್ ಮತ್ತು ಪ್ಯಾನ್ ಅಳವಡಿಸಿರುವುದು ಈ ವಾಹನದ ವಿಶೇಷವಾಗಿದೆ.

ಅನುಪಯುಕ್ತ ವಾಹನ ಬಳಸಿ ಸ್ತ್ರೀ ಶೌಚಾಲಯ ನಿರ್ಮಾಣ: ಮಹಿಳಾ ಸ್ವಾಸ್ತ ಸಮಾಜದ ನಿರ್ಮಾಣಕ್ಕಾಗಿ ವಾ.ಕ.ರ.ಸಾ. ಸಂಸ್ಥೆಯು ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅನುಪಯುಕ್ತ ವಾಹನವನ್ನು 'ಸ್ತ್ರೀ ಶೌಚಾಲಯ'ವನ್ನಾಗಿ ಪರಿವರ್ತಿಸಿದೆ.

ಈ ಶೌಚಾಲಯದ ನಿರ್ಮಾಣಕ್ಕೆ ಒಟ್ಟು 8.13 ಲಕ್ಷ ರೂ. ವೆಚ್ಚ ತಗುಲಿದೆ. ವಾಹನದ ಒಳ ಹೋಗುವ ಸ್ಟೆಪ್‍ನ ಬಲಭಾಗದಲ್ಲಿ ಮಗುವಿಗೆ ಡೈಪರ್ ಬದಲಾಯಿಸುವ ಸಲುವಾಗಿ ಮಗು ಆರೈಕೆ ವ್ಯವಸ್ಥೆಯ ಕೊಠಡಿ ಕಲ್ಪಿಸಲಾಗಿದೆ ಹಾಗೂ ಮಗುವಿಗೆ ಹಾಲುಣಿಸುವ ಸಲುವಾಗಿ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದೆ.

ಈ ವಾಹನದಲ್ಲಿ 4 ಶೌಚಾಲಯಗಳಿದ್ದು, 2 ಶೌಚಾಲಯ ಇಂಡಿಯನ್ ಮಾದರಿ ಹಾಗೂ 2 ಶೌಚಾಲಯ ವೆಸ್ಟರ್ನ್ ಮಾದರಿಯಲ್ಲಿ ಇವೆ ಹಾಗೂ ಕೈ ತೊಳೆಯುವ ಸಲುವಾಗಿ ನೀರಿನ ನಳಗಳನ್ನು ಒಳಗೊಂಡಿರುವ 2 ಸಿಂಕ್‍ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ವ್ಯವಸ್ಥೆಗಾಗಿ 3.5 ಕೆವಿಎ ಸಾಮಥ್ರ್ಯದ ಯುಪಿಎಸ್ ಇನ್ವರ್ಟರ್ ಅಳವಡಿಸಲಾಗಿದೆ ಮತ್ತು ಸಂಚಾರಿ ಶೌಚಾಲಯಕ್ಕೆ ಸ್ಥಳೀಯವಾಗಿ ಲಭ್ಯವಿರುವ ಎಕ್ಟ್ಸರನಲ್ ಎ.ಸಿ. ಪವರ್ ಸಪ್ಲೈನಿಂದ ಸಂಪರ್ಕ ಪಡೆದುಕೊಳ್ಳಲು ಬೇಕಾದ ಸ್ವಿಚ್ ಅಳವಡಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ್ ಕತ್ತಿ, ಆರೋಗ್ಯ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News