ರೋಹಿಣಿ ಸಿಂಧೂರಿಗೆ ಎಲ್ಲವೂ ಗೊತ್ತು ಎಂಬ ಅಹಂ ಇದೆ: ಮಾಜಿ ಸಚಿವ ಎ.ಮಂಜು ವಾಗ್ದಾಳಿ

Update: 2021-06-05 16:54 GMT

ಮೈಸೂರು,ಜೂ.5: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಎಲ್ಲಾ ನನಗೆ ಗೊತ್ತು ಎಂಬ ಅಹಂ. ಹಾಗಾಗಿಯೇ ಅವರು ಎಲ್ಲರನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ವಾಗ್ದಾಳಿ ನಡೆಸಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ರೋಹಿಣಿ ಸಿಂಧೂರಿ ನನ್ನ ಬಳಿ ಕೆಲಸ ಮಾಡಿದ್ದಾರೆ. ಅವರ ಹಲವಾರು ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿದ್ದೆ. ಅವರಿಗೆ ಎಲ್ಲಾ ನನಗೆ ಗೊತ್ತು ಎಂಬ ಅಹಂ ಇದೆ ಎಂದು ಕಿಡಿಕಾರಿದರು.

ದನ ಕಾಯುವವನೂ ಐಎಎಸ್ ಪಾಸ್ ಮಾಡಿದ್ದಾನೆ. ಆದರೆ ಅಧಿಕಾರ ಸಿಕ್ಕ ನಂತರ ಹೇಗೆ ನಡೆದುಕೊಳ್ಳಬೇಕು ಎಂಬುದು ಬಹು ಮುಖ್ಯ. ಐಎಎಸ್ ಅಧಿಕಾರಿಯೂ ಒಬ್ಬ ಮನುಷ್ಯನೇ ಆಗಿರುತ್ತಾನೆ. ಐಎಎಸ್ ಅಧಿಕಾರಿಗಳು ಮಾಡುವ ತಪ್ಪನ್ನು ತಿದ್ದಲೇ ಜನ ಪ್ರತಿನಿಧಿಗಳಿದ್ದಾರೆ. ಆದರೆ, ರೋಹಿಣಿ ಸಿಂಧೂರಿ ಅವರು ತಮ್ಮದೇ ನಿರ್ಧಾರ ಸರಿ ಎನ್ನುವ ಮನೋಭಾವನೆ ಹೊಂದಿದ್ದಾರೆ. ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಆರೋಪಿಸಿದರು.

ಮೈಸೂರು ನಗರಕ್ಕೆ ಏನು ಬೇಕು ಎಂಬುದನ್ನು ಆ ಕಾಲದಲ್ಲೇ ಮೈಸೂರು ಅರಸರು ಆಲೋಚಿಸಿ ನಗರವನ್ನು ಕಟ್ಟಿದ್ದಾರೆ. ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿಗೆ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕಾದ ರೋಹಿಣಿ ಸಿಂಧೂರಿ ಅವರೇ ಈ ರೀತಿ ಪಾರಂಪರಿಕ ಕಟ್ಟಡಗಳನ್ನು ಹಾಳುಮಾಡುತ್ತಿರುವುದು ಸರಿಯಲ್ಲ. ಅವರು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಎನ್ಕ್ಯಾಶ್ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳು ಆನ್ಲೈನ್ ಶಿಕ್ಷಣಕ್ಕೆ ಒಗ್ಗಬೇಕು ಎನ್ನುವ ಡಿಸಿ ಅವರು ತಮ್ಮ ಮಕ್ಕಳಿಗಾಗಿ ಶಿಕ್ಷಕರನ್ನೇ ಮನೆಗೆ ಕರೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಸಭೆಯಲ್ಲಿ ಚರ್ಚಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ಆಂಧ್ರ ಸಿಎಂ ಜಗನ್ ಅವರು ಸಿಂಧೂರಿ ಅವರ ಪರ ಲಾಬಿ ಮಾಡುತ್ತಿದ್ದಾರೆ ಎಂಬುನ್ನು ನಾವು ಒಪ್ಪುವುದಿಲ್ಲ. ಯಾರೇ ಲಾಬಿ ಮಾಡಿದರೂ ಇಲ್ಲಿ ಕೇಳುವವರಿಲ್ಲ. ಅಧಿಕಾರಿ ಯಾವುದೇ ರಾಜ್ಯದವರಾಗಲಿ ಕರ್ನಾಟಕಕ್ಕೆ ಪೋಸ್ಟ್ ಆದ ನಂತರ ರಾಜ್ಯದ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News