ಮಂಡ್ಯ: ಕೃಷಿ ಕಾಯ್ದೆ ತಿದ್ದುಪಡಿ ಆದೇಶ ಪತ್ರ ದಹಿಸಿ ರೈತರ ಪ್ರತಿಭಟನೆ

Update: 2021-06-05 17:00 GMT

ಮಂಡ್ಯ, ಜೂ.5: ಕೃಷಿ, ಭೂಮಿ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ರೈತಸಂಘಟನೆ ಕಾರ್ಯಕರ್ತರು ಆದೇಶ ಪತ್ರವನ್ನು ದಹಿಸಿ ಪ್ರತಿಭಟನೆ ನಡೆಸಿದರು.

ಗ್ರಾಮದ ಕಾವೇರಿ ಪ್ರತಿಮೆ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ರೈತ ಹೋರಾಟಗಾರರಾದ ಬಾಬಾಗೌಡ ಪಾಟೀಲ್, ಇಂಡುವಾಳು ಸಿ.ಚಾಮುಂಡಪ್ಪ, ಕುಂಟನಹಳ್ಳಿ ಗದ್ದೆನಿಂಗೇಗೌಡ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತ ಸಂಘಟನೆಗಳ ಒಕ್ಕೂಟದವರು ಬಿಸಿಲು, ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದಾರೆ. ಆದರೂ ಕೇಂದ್ರದ ಬಿಜೆಪಿ ಸರಕಾರ ರೈತರ ಸಮಸ್ಯೆ ಆಲಿಸಿ ಪರಿಹಾರ ದೊರಕಿಸಲು ಮುಂದಾಗದಿರುವುದು ಅತ್ಯಂತ ದರ್ಪದ ನಡೆಯಾಗಿದೆ ಎಂದು ಕಿಡಿಕಾರಿದರು.

ಈ ವೇಳೆ ಚಂದ್ರಶೇಖರ್, ಈ.ಬಸವರಾಜು, ಸಿದ್ದೇಗೌಡ, ಉಮಾಶಂಕರ್, ಸಿದ್ದೇಗೌಡ, ಶ್ರೀನಿವಾಸ್, ದೇವೇಗೌಡ, ನಾಗರಾಜು, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News