ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣ: ಶಿಕ್ಷಣ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು, ಜೂ.7: ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರತ್ನ ಅವರ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.
ಲೆಟ್ಜ್ ಕಿಡ್ಸ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸರಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಜೂ.18ರೊಳಗೆ ನ್ಯಾಯಪೀಠಕ್ಕೆ ವರದಿ ನೀಡಬೇಕು ಎಂದು ಆದೇಶಿಸಿತು.
ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರಾದ ಪ್ರಸನ್ನಕುಮಾರ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಾಗರತ್ನ ಅವರು ಸರಯೂ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ. ನಾಗರತ್ನ ಅಕ್ರಮವಾಗಿ ಟ್ರಸ್ಟ್ ಅನ್ನು ಸರಕಾರಿ ಶಾಲೆ ಆವರಣದಲ್ಲಿ ನಡೆಸುತ್ತಿದ್ದಾರೆ. ಹೀಗಾಗಿ, ಸರಕಾರಿ ಸೇವೆಯಲ್ಲಿರುವ ನಾಗರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.
ಏನಿದು ಪ್ರಕರಣ: ವಿಜಯನಗರದಲ್ಲಿ ಬಿಇಒ ಆಗಿ ಕೆಲಸ ಮಾಡುತ್ತಿದ್ದ, ನಂತರ ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯ ಮಧ್ಯಾಹ್ನದ ಬಿಸಿಯೂಟ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ನಾಗರತ್ನ ಎಂಬುವವರು ನಡೆಸುತ್ತಿದ್ದ ಸರಯೂ ಚಾರಿಟಬಲ್ ಟ್ರಸ್ಟ್ ನ ನಾಲ್ಕು ಮಕ್ಕಳು ತಮ್ಮ ಪೋಷಕರ ಜತೆ ಮಧ್ಯಪ್ರದೇಶಕ್ಕೆ ತೆರಳಿದವರು ಪುನಃ ಬಂದಿಲ್ಲ ಎಂಬ ಮಾಹಿತಿ ಕಾನೂನು ಸೇವಾ ಪ್ರಾಧಿಕಾರಕ್ಕೆ ದೊರಕಿತು.
ಕಾನೂನು ಸೇವಾ ಪ್ರಾಧಿಕಾರವು ಮಧ್ಯಪ್ರದೇಶದ ಕಾನೂನು ಪ್ರಾಧಿಕಾರವನ್ನು ಸಂಪರ್ಕಿಸಿ ಮಕ್ಕಳ ಪತ್ತೆಗೆ ಮುಂದಾಯಿತು. ಆಗ ದೊರೆತ ಮಕ್ಕಳು, ಸರಯೂ ಟ್ರಸ್ಟ್ ನಲ್ಲಿ ತಮ್ಮನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ತಿಳಿಸಿದರು.
ಕೂಡಲೇ ಪ್ರಾಧಿಕಾರದ ಸದಸ್ಯರು ವಿಜಯನಗರದ ಸರಯೂ ಟ್ರಸ್ಟ್ ಗೆ ಭೇಟಿ ನೀಡಿ ಪರಿಶೀಲಿಸಿದಾಗ ಕಳೆದ 8 ವರ್ಷದಿಂದ ವಿಜಯನಗರ ಭಾಗದಲ್ಲಿ ಭಿಕ್ಷಾಟನೆ ಮತ್ತು ಬೀದಿ ಬದಿ ಆಟಿಕೆಗಳ ಮಾರಾಟದಲ್ಲಿ ತೊಡಗಿದ್ದ 33 ಮಕ್ಕಳನ್ನು ನಿಯಂತ್ರಿಸುತ್ತಿದ್ದ ಅಂಶ ಬಯಲಾಗಿತ್ತು.