ಅತಿಥಿ ಗೃಹ ಪ್ರವೇಶಕ್ಕಾಗಿ ನಿಖಿಲ್ ಕುಮಾರಸ್ವಾಮಿ- ಝಮೀರ್ ಅಹ್ಮದ್ ಬೆಂಬಲಿಗರ ನಡುವೆ ಗಲಾಟೆ

Update: 2021-06-09 16:31 GMT

ಬೆಂಗಳೂರು, ಜೂ.9: ಇಲ್ಲಿನ ಸದಾಶಿವನಗರದಲ್ಲಿನ ಅತಿಥಿ ಗೃಹ ಪ್ರವೇಶಕ್ಕಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಬೆಂಬಲಿಗರ ನಡುವೆ ಗಲಾಟೆ ನಡೆದಿರುವ ಘಟನೆ ವರದಿಯಾಗಿದೆ.

ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಸದಾಶಿವ ನಗರದಲ್ಲಿರುವ ಝಮೀರ್ ಅಹ್ಮದ್ ಖಾನ್ ಮಾಲಕತ್ವದ್ದು ಎನ್ನಲಾದ ಅತಿಥಿ ಗೃಹದಲ್ಲಿನ ಕೆಲ ವಸ್ತುಗಳಿಗೆ ಗಲಾಟೆಯಿಂದ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.

ಝಮೀರ್ ಅಹ್ಮದ್ ಖಾನ್ ಸದಾಶಿವನಗರದಲ್ಲಿನ ತಮ್ಮ ಮಾಲಕತ್ವದ ಅತಿಥಿ ಗೃಹವನ್ನು ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಇದೀಗ ಝಮೀರ್ ಅಹ್ಮದ್ ಖಾನ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಜತೆಗೆ, ಕುಮಾರಸ್ವಾಮಿ ವಿರುದ್ಧ ವಾಕ್ಸಮರ ನಡೆಸುತ್ತಿರುವ ಕಾರಣದಿಂದಾಗಿಯೂ ಅತಿಥಿ ಗೃಹ ಬಿಟ್ಟುಕೊಡುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಕೇಳಲು ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ತೆರಳಿದ್ದರು. ಇದೇ ವೇಳೆ ಝಮೀರ್ ಬೆಂಬಲಿಗರು ಕೂಡ ಅತಿಥಿ ಗೃಹದ ಬಳಿ ಜಮಾವಣೆಗೊಂಡಿದ್ದರು. ಈ ವೇಳೆ ಇಬ್ಬರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಬಳಿಕ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕ ಫಾರೂಕ್ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News