ಕೋವಿಡ್‍ಗೆ ಪತಿ ಬಲಿ: ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮುಂದುವರಿಸಿದ ಅಂಗನವಾಡಿ ಕಾರ್ಯಕರ್ತೆ

Update: 2021-06-09 17:13 GMT

ಬೆಂಗಳೂರು, ಜೂ. 9: `ಕುಟುಂಬದ ಎಲ್ಲ ನಾಲ್ವರಿಗೂ ಕೋವಿಡ್ ಸೋಂಕು ತಗುಲಿತ್ತು. ನಾಲ್ವರೂ ಚಿಕಿತ್ಸೆ ಪಡೆದೆವು. ಅತ್ತೆ ಸೇರಿ ಮೂವರೂ ಹುಷಾರಾಗಿ ಮನೆಗೆ ಬಂದೆವು. ಆದರೆ ಪತಿ ಸಾವಿಗೀಡಾದರು'. ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ನಡೆಸಿದ ಸಂವಾದದ ವೇಳೆ ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಅವರು ಈ ರೀತಿ ಹೇಳಿದಾಗ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದವು.

ಗಿರಿಜಾ ಅವರು ಬೆಂಗಳೂರಿನ ಭುವನೇಶ್ವರಿ ನಗರದ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಸೋಂಕಿನಿಂದ ಪತಿಯ ವಿಯೋಗ ಹಾಗೂ ಇತ್ತೀಚೆಗಷ್ಟೇ ಕೋವಿಡ್ ನಿಂದ ಮುಕ್ತರಾಗಿರುವ ಅತ್ತೆ ಮತ್ತು ಮಗುವಿನ ನಡುವೆ ಎಲ್ಲವನ್ನೂ ಮರೆತು ಅವರು ಅಂಗನವಾಡಿಯಲ್ಲಿ ಮತ್ತೆ ಕಾರ್ಯನಿರತರಾಗಿದ್ದಾರೆ. ಈ ಮಾಹಿತಿಯನ್ನು ಪಡೆದುಕೊಂಡ ಮುಖ್ಯಮಂತ್ರಿ, ಗಿರಿಜಾ ಅವರಿಗೆ ಸಾಂತ್ವನ ಮತ್ತು ಧೈರ್ಯ ಹೇಳಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸಲಹೆ ಮಾಡಿದರು. ಸಂಕಷ್ಟದ ಸಂದರ್ಭದಲ್ಲೂ ಕಾರ್ಯತತ್ಪರತೆ ಮೆರೆದ ಅವರನ್ನು ಮುಖ್ಯಮಂತ್ರಿ ಅಭಿನಂದಿಸಿದರು.

ಮುಖ್ಯಮಂತ್ರಿ ಜೊತೆ ಸಂವಾದ ನಡೆಸಿದ ಕೋಲಾರ ಜಿಲ್ಲೆಯ ಎರವಾರಿಪಲ್ಲಿಯ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ `ಜನರಿಗೆ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಭಯವಿತ್ತು. ಎರಡನೇ ಅಲೆ ಮೊದಲನೇ ಅಲೆಗಿಂತ ತೀವ್ರವಾಗಿದ್ದರೂ ಭಯವೇ ಇಲ್ಲ. ಕೋವಿಡ್ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಈ ದಿಸೆಯಲ್ಲಿ ಪ್ರಯತ್ನಿಸಿ ಯಶಸ್ವಿಯಾಗುತ್ತಿದ್ದೇವೆ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಂಡರು.

ಅಂಗನವಾಡಿ ಕಾರ್ಯಕರ್ತೆಯ ಜವಾಬ್ದಾರಿಗಳ ಜೊತೆ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಇತರ ಸಮೀಕ್ಷೆಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಮನೆ ಮನೆಗೆ ಭೇಟಿ ನೀಡಿ ಪೌಷ್ಠಿಕ ಆಹಾರ ವಿತರಣೆ ಮತ್ತು ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸುವುದು ಕಷ್ಟದಾಯಕವಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಎನ್. ನಾಗರತ್ನ ಹೇಳಿದರು.

ಅತ್ಯಂತ ಕೆಳಸ್ತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಯಶಸ್ವಿ ಕಾರ್ಯಾಚರಣೆ ನಡೆಸಿ ಮಾನವೀಯತೆ ಮೆರೆದಿರುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದದ್ದು ಎಂದು ಮುಖ್ಯಮಂತ್ರಿ ಮೆಚ್ಚುಗೆ ಸೂಚಿಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು `ಕೊರೋನ ಸೇನಾನಿ' ಗಳೆಂದು ಘೋಷಿಸಿ 2000 ರೂ.ಗಳ ಪ್ರೋತ್ಸಾಹ ಧನ ಹಾಗೂ ಕಾರ್ಯನಿರತರಾದಾಗ ಮೃತಪಟ್ಟವರಿಗೆ 30 ಲಕ್ಷ ರೂ.ಗಳ ಪರಿಹಾರ ನೀಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಹಲವು ಅಂಗನವಾಡಿ ಕಾರ್ಯಕರ್ತೆಯರು ಸ್ವಾಗತಿಸಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು.

ಕುಗ್ರಾಮಗಳಲ್ಲಿ ಸೇವಾ ನಿರತರಾಗಿರುವ ಕಿರಿಯ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮೊಡನೆ, ಮುಖ್ಯಮಂತ್ರಿಗಳು ನೇರವಾಗಿ ಮಾತನಾಡಿದ್ದು ಹೆಚ್ಚಿನ ಉತ್ಸಾಹ ನೀಡಿದಂತಾಗಿದೆ ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಂಜುಳಾ ಸಂಗಮೇಶ ಪುಳಕಿತರಾದರು.

ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಬಗ್ಗೆ ಸುಲಲಿತವಾಗಿ ವಿವರಣೆ ನೀಡಿ ಉಪಯುಕ್ತ ಸಲಹೆಗಳನ್ನೂ ನೀಡಿದ ಮಂಜುಳಾ ಅವರನ್ನು ಮುಖ್ಯಮಂತ್ರಿ ಅಭಿನಂದಿಸಿ ಬೆಂಗಳೂರಿಗೆ ಭೇಟಿ ನೀಡಿದಾಗ ತಮ್ಮ ಅಧಿಕೃತ ನಿವಾಸಕ್ಕೆ ಬಂದು ಆತಿಥ್ಯ ಸ್ವೀಕರಿಸುವಂತೆ ಆಹ್ವಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News