ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರಿಗೆ ಹೈಕಮಾಂಡ್ ಕಡಿವಾಣ ಹಾಕಬೇಕಿದೆ: ಸಚಿವ ವಿ.ಸೋಮಣ್ಣ

Update: 2021-06-12 17:25 GMT

ಮೈಸೂರು,ಜೂ.12: ಕೊರೋನ ಸಂದರ್ಭದಲ್ಲಿ ಪಕ್ಷದ ವಿರುದ್ಧ ಮಾತನಾಡುವವರಿಗೆ, ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರಿಗೆ ಪಕ್ಷದ ಹೈಕಮಾಂಡ್ ಕಡಿವಾಣ ಹಾಕಬೇಕಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಶನಿವಾರ ಭೇಟಿ ನೀಡಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಭೇಟಿಯಾದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಯಾರೂ ನಾಯಕತ್ವ ಬದಲಾವಣೆ ಬಗ್ಗೆ ದೆಹಲಿಗೆ ಹೋಗಿಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ನನ್ನ ಬುದ್ಧಿವಂತಿಕೆಯನ್ನು ಕೊರೋನ ನಿಯಂತ್ರಣಕ್ಕೆ ಬಳಸಿಕೊಳ್ಳುತ್ತಿದ್ದೇನೆ. ಕೆಲವರು ಅವರ ಬುದ್ಧಿವಂತಿಕೆಯನ್ನು ಬೇರೆ ವಿಚಾರಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕೆ ದೆಹಲಿಗೆ ಹೋಗಿದ್ದೀರಿ ಎಂಬುದನ್ನು ಅವರ ಬಳಿಯೇ ಕೇಳಿ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಗರಂ ಆದರು.
ಪ್ರತಿಯೊಬ್ಬರಿಗೂ ಒಂದೊಂದು ಕಾಯಿಲೆ ಇರುತ್ತದೆ. ಕೆಲವರಿಗೆ ದೆಹಲಿಗೆ ಹೋಗುವ ಕಾಯಿಲೆ, ಮತ್ತೆ ಕೆಲವರಿಗೆ ಕೆಲಸ ಮಾಡುವ ಕಾಯಿಲೆ. ನನಗೆ ಕೊರೋನದಂತಹ ಈ ಸಂದರ್ಭದಲ್ಲಿ ಕೆಲಸ ಮಾಡುವ ಕಾಯಿಲೆ ಇದ್ದು, ನಾವೆಲ್ಲಾ ಕೊರೋನ ನಿಯಂತ್ರಣ ಮಾಡಬೇಕು. ಇಂತಹ ಸಂದರ್ಭಗಳಲ್ಲಿ ಈ ರೀತಿಯ ಬೆಳವಣಿಗೆ ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News