ದಿಲ್ಲಿಗೆ ಹೋಗುವವರಿಗೆ ನಿರ್ಬಂಧ ಹೇರಲು ಆಗದು: ಸಚಿವ ಆರ್.ಶಂಕರ್

Update: 2021-06-12 17:55 GMT

ಯಾದಗಿರಿ, ಜೂ. 12: `ಹೊಸದಿಲ್ಲಿಗೆ ಯಾರೂ ಹೋಗಬಾರದು ಎಂದು ನಿರ್ಬಂಧ ಹೇರಲು ಸಾಧ್ಯವಿಲ್ಲ. ಒಬ್ಬ ರಾಜಕಾರಣಿ ಕೇಂದ್ರ ಸ್ಥಾನಕ್ಕೆ ಹೋಗಬಾರದೇ?' ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಪ್ರಶ್ನಿಸಿದ ಸಚಿವ ಆರ್.ಶಂಕರ್, `ಮೂಗು ಇರುವ ತನಕ ನೆಗಡಿ ತಪ್ಪಲ್ಲ' ಎಂದು ನಾಯಕತ್ವ ಬದಲಾವಣೆ ಸಂಬಂಧ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಹೊಸದಿಲ್ಲಿಗೆ ಹೋಗುವರೆಲ್ಲಾ ಮುಖ್ಯಮಂತ್ರಿ ಬದಲಾವಣೆಗೆ ಹೋಗುತ್ತಾರೆಯೇ? ಒಬ್ಬ ರಾಜಕಾರಣಿ ದಿಲ್ಲಿಗೆ ಹೋಗಿ ಬಂದಾಗಲೂ ಒಬ್ಬ ಮುಖ್ಯಮಂತ್ರಿ ಬದಲಾವಣೆ ಆಗಬೇಕು. ದಿಲ್ಲಿಗೆ ಹೋಗುವುದು ಅವರ ವೈಯಕ್ತಿಕ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟುವ ಅಗತ್ಯವಿಲ್ಲ' ಎಂದು ಇದೇ ವೇಳೆ ಶಾಸಕ ಅರವಿಂದ ಬೆಲ್ಲದ್ ನಡೆಯನ್ನು ಸಮರ್ಥಿಸಿಕೊಂಡರು.

`ನಾಯಕತ್ವ ಬದಲಾವಣೆ ಸಂಬಂಧ ವರಿಷ್ಠರು ಸ್ಪಷ್ಟಣೆ ನೀಡಿದ್ದಾರೆ. ಅಲ್ಲದೆ, ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ. ಮುಂದಿನ ವಿಧಾನಸಭಾ ಚುನಾವಣೆಯನ್ನೂ ಅವರ ನಾಯಕತ್ವದಲ್ಲಿ ನಡೆಸುತ್ತೇವೆ. ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ' ಎಂದು ಆರ್.ಶಂಕರ್ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News