ದಿನಗೂಲಿ ನೌಕರರೂ ತುಟ್ಟಿ ಭತ್ಯೆ, ರಜೆ ಪಡೆಯಲು ಅರ್ಹರು: ಹೈಕೋರ್ಟ್
ಬೆಂಗಳೂರು, ಜೂ.14: ಸರಕಾರಿ ನೌಕರರಿಗೆ ಇರುವಂತೆಯೇ ಸರಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳಲ್ಲಿ ಕಾರ್ಯ ನಿರ್ವಹಿಸುವ ದಿನಗೂಲಿ ನೌಕರರಿಗೂ ಶೇ.100ರಷ್ಟು ತುಟ್ಟಿ ಭತ್ಯೆ ಮತ್ತು ವರ್ಷಕ್ಕೆ 30 ವೇತನ ಸಹಿತ ರಜೆ(ಇಎಲ್) ನೀಡಬೇಕಿದೆ. ಅವರು ಕೂಡ ಈ ಸೌಲಭ್ಯಗಳಿಗೆ ಅರ್ಹರಿದ್ದಾರೆ ಎಂದು ಹೈಕೋರ್ಟ್ ಆದೇಶಿಸಿದೆ.
ದಿನಗೂಲಿ ನೌಕರರಿಗೆ ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ-2012 ಅಡಿ ಲಭ್ಯವಾಗುತ್ತಿದ್ದ ಶೇ.100ರಷ್ಟು ತುಟ್ಟಿ ಭತ್ಯೆ ಹಾಗೂ ಗಳಿಕೆ ರಜೆಯನ್ನು ಕಡಿತಗೊಳಿಸಿ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ತುಟ್ಟಿ ಭತ್ಯೆಯನ್ನು ಶೇ.90ಕ್ಕೆ ಸೀಮಿತಗೊಳಿಸಿ ಹಾಗೂ 30 ದಿನಗಳ ಗಳಿಕೆ ರಜೆ ಸ್ಥಗಿತಗೊಳಿಸಿ ರಾಜ್ಯ ಸರಕಾರ 2020ರ ಜನವರಿ 10 ಮತ್ತು ಜುಲೈ 12ರಂದು ಹೊರಡಿಸಿರುವ ಸುತ್ತೋಲೆಗಳು ಕಾಯ್ದೆಗೆ ವಿರುದ್ಧವಾಗಿದ್ದು, ರದ್ದುಗೊಳಿಸಲಾಗುವುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.