ನಟ ಸಂಚಾರಿ ವಿಜಯ್ ಗೆ ಇತ್ತು ಮಲೆನಾಡಿನ ನಂಟು: ಕವಿಶೈಲ ನೆಚ್ಚಿನ ತಾಣ

Update: 2021-06-15 17:50 GMT

ಶಿವಮೊಗ್ಗ, ಜೂ.15:ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಗೆ ಶಿವಮೊಗ್ಗ ಜಿಲ್ಲೆಗೆ ವಿಶೇಷ ನಂಟಿದೆ. ತೀರ್ಥಹಳ್ಳಿಯ ಕವಿಶೈಲ ಸಂಚಾರಿ ವಿಜಯ್ ಅವರ ನೆಚ್ಚಿನ ತಾಣವಾಗಿತ್ತು ಅನ್ನೊಂದು ವಿಶೇಷ. ಅಲ್ಲದೇ ಶಿವಮೊಗ್ಗದ ಹೊಟೇಲ್‍ ಒಂದರ ತಿಂಡಿ ಕೂಡ ಅಚ್ಚುಮೆಚ್ಚು.

ನಾನು ಅವನಲ್ಲ ಅವಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಸಂಚಾರಿ ವಿಜಯ್‍ಗೆ ಮೊದಲ ನಾಗರಿಕ ಸನ್ಮಾನವಾಗಿದ್ದು ಉಕ್ಕಿನ ನಗರಿ ಭದ್ರಾವತಿಯಲ್ಲಿ. ಸಂಚಾರಿ ವಿಜಯ್ ಅವರಿಗೆ ರಾಜ್ಯದ ವಿವಿಧೆಡೆ ಸ್ನೇಹಿತರ ಬಳಗವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಆಪ್ತರ ಪೈಕಿ ಒಬ್ಬರು ಶಂಕರ್ ಮಿತ್ರ. ಸಂಚಾರಿ ವಿಜಯ್ ಅವರು ಶಿವಮೊಗ್ಗಕ್ಕೆ ಬಂದಾಗಲೆಲ್ಲ ಇವರನ್ನು ಭೇಟಿಯಾಗುತ್ತಿದ್ದರು, ಒಟ್ಟಿಗೆ ಸುತ್ತಾಡುತ್ತಿದ್ದರು.

ಕುಪ್ಪಳಿ, ಕವಿಶೈಲ, ಮಂಡಗದ್ದೆ: ನಟ ಸಂಚಾರಿ ವಿಜಯ್ ಅವರು ಅವಕಾಶ ಸಿಕ್ಕಾಗಲೆಲ್ಲ ಕುಪ್ಪಳಿಗೆ ಭೇಟಿ ನೀಡುತ್ತಿದ್ದರು. ಕವಿಶೈಲವನ್ನು ತುಂಬಾ ಇಷ್ಟಪಡುತ್ತಿದ್ದರು ಅನ್ನುತ್ತಾರೆ ಶಂಕರ್ ಮಿತ್ರ. ರಾಷ್ಟ್ರಕವಿ ಕುವೆಂಪು ಮತ್ತು ಪೂರ್ಣ ತೇಜಸ್ವಿ ಅವರ ಸಮಾಧಿ ಬಳಿಗೆ ಹೋಗಿ ನಮಸ್ಕರಿಸಿ ಮೌನಕ್ಕೆ ಶರಣಾಗುತ್ತಿದ್ದರು. ಇದಿಷ್ಟೆ ಅಲ್ಲ, ಮಂಡಗದ್ದೆ, ಗಾಜನೂರಿಗೆ ಒಮ್ಮೆ ಹೋಗಿ ಪ್ರಕೃತಿ ಸೊಬಗಿನ ಜೊತೆ ಸಮಯ ಕಳೆಯಬೇಕು ಎಂದು ಹೇಳಿದ್ದರಂತೆ. ಸಿಗಂದೂರು ದೇವಸ್ಥಾನ, ಶರಾವತಿ ಹಿನ್ನೀರಿನ ಲಾಂಚ್‍ನಲ್ಲಿನ ಸಂಚಾರ ಬಲು ಅಚ್ಚುಮೆಚ್ಚು. ನಾತಿಚರಾಮಿ ಸಿನಿಮಾ ತಂಡದ ಜೊತೆ ಒಮ್ಮೆ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು. ನಟಿ ಶೃತಿ ಹರಿಹರನ್ ಸೇರಿದಂತೆ ಹಲವರು ಈ ತಂಡದಲ್ಲಿದ್ದರು. 

ಮಲೆನಾಡು ಊಟ, ತಿಂಡಿ ಬಲು ಇಷ್ಟ: ಸಂಚಾರಿ ವಿಜಯ್ ಅವರಿಗೆ ಮಲೆನಾಡಿನ ಊಟ, ತಿಂಡಿ ಬಹಳ ಇಷ್ಟ ಅಂತಾ ಸ್ಮರಿಸಿಕೊಳ್ಳುತ್ತಾರೆ ಶಂಕರ್ ಮಿತ್ರ. ನೀರ್ ದೋಸೆ, ಚಟ್ನಿ ತುಂಬಾ ಪ್ರೀತಿ. ಮೀನಾಕ್ಷಿ ಭವನ ಹೊಟೇಲ್‍ನ ದೋಸೆ, ಮೊಸರು ಅವಲಕ್ಕಿ ಇಷ್ಟಪಡುತ್ತಿದ್ದರು. ಶಿವಮೊಗ್ಗಕ್ಕೆ ಬಂದಾಗಲೆಲ್ಲ ನೆನಪು ಮಾಡಿಕೊಂಡು ಅಲ್ಲಿಗೆ ಹೋಗುತ್ತಿದ್ದರು ಎನ್ನುತ್ತಾರೆ ಶಂಕರ್. ಇನ್ನು, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಫುಟ್‍ಪಾತ್‍ ಮೇಲೆ ಗಾಡಿಯಲ್ಲಿ ಮಾಡುವ ಪಡ್ಡು ಇಷ್ಟಪಡುತ್ತಿದ್ದರು. ಎರಡು ಪ್ಲೇಟ್‍ ಪಡ್ಡು ತಿಂದರಷ್ಟೆ ಅವರಿಗೆ ಸಮಾಧಾನವಾಗುತ್ತಿತ್ತು.  

ಮೊದಲ ನಾಗರಿಕ ಸನ್ಮಾನ: ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದಾಗ ಸಂಚಾರಿ ವಿಜಯ್ ಅವರಿಗೆ ಮೊಟ್ಟಮೊದಲು ನಾಗರಿಕ ಸನ್ಮಾನವಾಗಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ. ಇಲ್ಲಿನ ಎಂಪಿಎಂ ರಂಗಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಕೆ.ಸಂಗಮೇಶ್ವರ್ ಮತ್ತು ಅಪ್ಪಾಜಿಗೌಡರ ಉಪಸ್ಥಿತಿಯಲ್ಲಿ ಸನ್ಮಾನ ಮಾಡಲಾಯಿತು. 

ಸಿಟಿ ಸೆಂಟರ್’ಗೆ ಕೊನೆ ಭೇಟಿ: ನಟ ಸಂಚಾರಿ ವಿಜಯ್ ಅವರು ‘ಆಕ್ಟ್ 1978’ ಸಿನಿಮಾದ ಪ್ರಮೋಷನ್‍ಗಾಗಿ ಶಿವಮೊಗ್ಗಕ್ಕೆ ಬಂದಿದ್ದರು. ಸಿಟಿ ಸೆಂಟರ್ ಮಾಲ್‍ನ ಭಾರತ್ ಸಿನಿಮಾಸ್‍ನಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಸಲಾಗಿತ್ತು ಎಂದು ಸ್ಮರಿಸಿಕೊಳ್ಳುತ್ತಾರೆ ಶಂಕರ್ ಮಿತ್ರ. ಪ್ರತಿ ಬಾರಿ ಶಿವಮೊಗಕ್ಕೆ ಬಂದಾಗಲೂ ಇಲ್ಲಿಯ ರಂಗ ತಂಡಗಳು, ರಂಗ ಕರ್ಮಿಗಳನ್ನು ಭೇಟಿಯಾಗಲು ಇಷ್ಟಪಡುತ್ತಿದ್ದರು. 

ಕೊನೆಯ ಫೋನ್ ಕರೆ

ಸಂಚಾರಿ ವಿಜಯ್ ಅವರು ಸಾಹಿತ್ಯ ಪ್ರೇಮಿ. ಇತ್ತೀಚೆಗೆ ಆತ್ಮಚರಿತ್ರೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಪ್ರಾಜೆಕ್ಟ್ ಒಂದಕ್ಕಾಗಿ ಆತ್ಮಚರಿತ್ರೆಗಳನ್ನು ಓದುತ್ತಿದ್ದರು. ಕಳೆದ ಶುಕ್ರವಾರ ಕೊನೆಯ ಬಾರಿಗೆ ಕರೆ ಮಾಡಿದ್ದ ಸಂಚಾರಿ ವಿಜಯ್ ಅವರು, ಒಂದೊಳ್ಳೆ ಆಟೋಬಯೋಗ್ರಫಿಯನ್ನು ರೆಫರ್ ಮಾಡುವಂತೆ ಕೇಳಿದ್ದರು ಅನ್ನುತ್ತಾರೆ ಶಂಕರ್ ಮಿತ್ರ. 

ಶಿವಮೊಗ್ಗದ ಜೊತೆ, ಇಲ್ಲಿಯ ರಂಗಕರ್ಮಿಗಳು ಸೇರಿದಂತೆ ಹಲವರ ಜೊತೆ ಉತ್ತಮ ನಂಟು ಹೊಂದಿದ್ದರು. ಈಗ ಅವರ ಅಕಾಲಿಕ ಮರಣ ಸ್ನೇಹಿತರ ಬಳಗಕ್ಕೆ ನೋವನ್ನುಂಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News