ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳ ಎಲ್ಲಾ ಸಿಬ್ಬಂದಿಗೂ ಪರಿಹಾರ ಘೋಷಿಸಿ: ಸಿದ್ದರಾಮಯ್ಯ ಒತ್ತಾಯ

Update: 2021-06-16 10:30 GMT

ಬೆಂಗಳೂರು, ಜೂ.16: ಖಾಸಗಿ ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಸರ್ಕಾರಿ ಸಂಬಳ ಪಡೆಯದೆ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ಪರಿಹಾರ ಘೋಷಿಸಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೋನ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಸರ್ಕಾರ ಬಿಡಿಗಾಸಿನ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೂ ಸೇರಿಸಿದ್ದಾರೆ. ಈ ಪ್ಯಾಕೇಜ್‍ನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನ ಎಂದು ತಿಳಿಸಲಾಗಿದೆ. ಆದರೆ ಈ ಪ್ಯಾಕೇಜ್ ಘೋಷಿಸುವಾಗ ಸರ್ಕಾರ ಖಾಸಗಿ ಅನುದಾನಿತ ಶಾಲೆಗಳ ಖಾಯಂ ಅಲ್ಲದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕೈ ಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅನುದಾನಿತ ಶಾಲೆ-ಕಾಲೇಜುಗಳಲ್ಲೂ 3-5 ಸಾವಿರ ರೂಪಾಯಿ ಮಾತ್ರ ಪಡೆದು ಕೆಲಸ ಮಾಡುವ ಸಾಕಷ್ಟು ಮಂದಿ ಅತಿಥಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು ಇದ್ದಾರೆ. ಬಹು ದೊಡ್ಡ ಸಂಖ್ಯೆಯಲ್ಲಿರುವ ಇವರನ್ನು ಸರ್ಕಾರದ ಪ್ಯಾಕೇಜ್‍ನಲ್ಲಿ ಸೇರಿಸದಿರುವುದು ನ್ಯಾಯಸಮ್ಮತವಲ್ಲ. ಮೊದಲ ಅಲೆಯಲ್ಲೂ ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿ ಹೈರಾಣಾಗಿದ್ದರು. ಆಗಲೂ ಸರ್ಕಾರ ಇವರ ನೆರವಿಗೆ ಬರಲಿಲ್ಲ. ಒಂದೂವರೆ ವರ್ಷದಿಂದ ಸಂಬಳಗಳಿಲ್ಲದೆ ಈ ಕುಟುಂಬಗಳು ವಿಪರೀತ ಸಂಕಷ್ಟದಲ್ಲಿವೆ. 

ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಅತಿಥಿ ಶಿಕ್ಷಕರು ಬೀದಿ ಬದಿ ತರಕಾರಿ, ಹೂ, ಹಣ್ಣು ಮಾರಾಟ ಮಾಡುತ್ತಿರುವುದು, ನರೇಗಾ ಕೂಲಿ ಕೆಲಸಕ್ಕೆ ಹೋಗಿರುವ ಅಸಂಖ್ಯಾತ ಪ್ರಕರಣಗಳನ್ನು ಹಾಗೂ ಸಂಕಷ್ಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ತಾಣಗಳಲ್ಲಿ ಇವರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರ ಇವರ ಕಡೆಗೆ ಗಮನ ಹರಿಸದಿರುವುದು ಅಕ್ಷಮ್ಯ ಸಂಗತಿ. ಮಕ್ಕಳಿಗೆ ಪಾಠ ಮಾಡುವ ಈ ಸಿಬ್ಬಂದಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದ ಸ್ಥಿತಿಯಲ್ಲಿ ಇದ್ದಾರೆ. ಸರ್ಕಾರದ ಪ್ಯಾಕೇಜ್‍ನಲ್ಲಿ ಖಾಸಗಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪರಿಹಾರ ಘೋಷಿಸಿಲ್ಲ. ಅವರಿಗೂ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು ಅಥವಾ ಅರ್ಜಿ ಕರೆದು ಭಿಕ್ಷೆಯಂತೆ ಒಂದೆರಡು ಸಾವಿರ ನೀಡುವ ಬದಲಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಈ ಸಿಬ್ಬಂದಿಗಳ ವಿವರಗಳನ್ನು ಪಡೆದು ನೇರವಾಗಿ ಅವರ ಖಾತೆಗಳಿಗೆ ಪರಿಹಾರದ ಹಣವನ್ನು ವರ್ಗಾಯಿಸಬೇಕೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News