ರಾಜ್ಯದ 3.5 ಲಕ್ಷ ಕುಟುಂಬಗಳಿಗೆ ಮನೆ ಒಡೆತನದ ಹಕ್ಕುಪತ್ರ: ವಸತಿ ಸಚಿವ ವಿ.ಸೋಮಣ್ಣ

Update: 2021-06-16 14:47 GMT

ಬೆಂಗಳೂರು, ಜೂ.16: ರಾಜ್ಯದ ಮೂರೂವರೆ ಲಕ್ಷ ಕುಟುಂಬಗಳಿಗೆ ಸರಕಾರ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅಂತಹ ಕುಟುಂಬಗಳು ವಾಸಿಸುತ್ತಿರುವ ಮನೆಗಳ ಒಡೆತನವನ್ನು ನೀಡಲಾಗುತ್ತಿದೆ, ಇದಕ್ಕಾಗಿ ಈ ಬಡ ಕುಟುಂಬಗಳು ಕೇವಲ 2000 ರೂ. ವೆಚ್ಚ ಮಾಡಿದರೆ ಸಾಕಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಬುಧವಾರ ಇಲ್ಲಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡಿನಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಧಾನ್ಯ ಕಿಟ್‍ಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು.

ಮೂಡಲಪಾಳ್ಯ, ನಾಗರಬಾವಿ, ಕಾವೇರಿಪುರ ಹಾಗೂ ನಾಯಂಡಹಳ್ಳಿ ವಾರ್ಡುಗಳಲ್ಲಿ ಅತಿ ಹೆಚ್ಚು ಬಡವರು ವಾಸಿಸುತ್ತಿದ್ದು, ಇವರ ಜೀವನ ಭದ್ರತೆಗೆ ವಿಶೇಷ ಕಾಳಜಿವಹಿಸಲಾಗಿದೆ. ಕೇಂದ್ರದಲ್ಲಿ ಪ್ರಧಾನಮಂತ್ರಿಗಳು ಮುಂದಿನ ನವೆಂಬರ್ ತಿಂಗಳವರೆಗೆ ರಾಷ್ಟ್ರದ 80 ಕೋಟಿ ಜನರಿಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಆದೇಶಿಸಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳು ಆರ್ಥಿಕ ನೆರವು ಸೇರಿದಂತೆ ಹಲವಾರು ಪ್ಯಾಕೇಜುಗಳನ್ನು ಘೋಷಿಸಿದ್ದಾರೆ, ಇದರೊಂದಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಾವು ಪ್ರತಿ ಬಡವರಿಗೂ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತಿರುವುದಾಗಿ ಸೋಮಣ್ಣ ತಿಳಿಸಿದರು.

ಬಡವರು ಆತಂಕ, ಭಯಕ್ಕೀಡಾಗಬಾರದು ಎಂದು ಮನವಿ ಮಾಡಿದ ಅವರು, ಈ ಕ್ಷೇತ್ರದ ಜನತೆಯ ಜೊತೆ ತಾವು ಇದ್ದು, ಯೋಗಕ್ಷೇಮ ನೋಡಿಕೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ, ಮಂಡಲಾಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದಾಸೆಗೌಡ, ಯುವನಾಯಕ ಡಾ. ಅರುಣ್ ಸೋಮಣ್ಣ, ವಾಗೀಶ್, ಮೋಹನ್ ಕುಮಾರ್, ಶ್ರೀಧರ್ ಮುಂತಾದ ಕಾರ್ಯಕರ್ತರು ಸಚಿವರ ಜೊತೆಗೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News