ಬಿಎಸ್‍ವೈ ನಾಯಕತ್ವ ಬದಲಾವಣೆಗಾಗಿ ಶಾಸಕರು ದಿಲ್ಲಿಗೆ ಹೋಗಿದ್ದು ಸತ್ಯ: ಸಚಿವ ಈಶ್ವರಪ್ಪ

Update: 2021-06-16 14:54 GMT

ಬೆಂಗಳೂರು, ಜೂ.16: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆಗಾಗಿ ಕೆಲವು ಶಾಸಕರು ಹೊಸದಿಲ್ಲಿಗೆ ಹೋಗಿದ್ದು ಸತ್ಯ. ಅದರ ಜೊತೆಗೆ ಯಡಿಯೂರಪ್ಪ ಇನ್ನೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ಕೆಲ ಶಾಸಕರ ಆಗ್ರಹವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವದ ವಿಚಾರದಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಲಿದೆ. ಪಕ್ಷದಲ್ಲಿ ಕೆಲವು ಗೊಂದಲಗಳು ಇರುವುದು ನಿಜ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ವಲಸೆ ಬಂದಂತಹ 17 ಶಾಸಕರಿಂದಲೇ ಸರಕಾರದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ನಾನು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ. ನಮ್ಮ ಸರಕಾರ ಅಧಿಕಾರ ವಹಿಸಿಕೊಂಡಾಗ ಬಹುಮತ ಇರಲಿಲ್ಲ. 17 ಶಾಸಕರು ಬಂದ ನಂತರ ನಮಗೆ ಬಹುಮತ ಸಿಕ್ಕಿದೆ ಎಂದು ಈಶ್ವರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News