ಸ್ಪರ್ಧಾತ್ಮಕ ಪರೀಕ್ಷೆ ಕಾರಣಕ್ಕೆ ಅತ್ಯಾಚಾರ ಆರೋಪಿಗೆ ಜಾಮೀನು ನೀಡಲಾಗದು: ಹೈಕೋರ್ಟ್

Update: 2021-06-17 17:05 GMT

ಬೆಂಗಳೂರು, ಜೂ.17: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಉದ್ದೇಶವಿದೆ ಹಾಗೂ ಕೊರೋನದಿಂದ ಪ್ರಕರಣದ ವಿಚಾರಣೆ ತಡವಾಗುತ್ತಿದೆ ಎಂಬುದು ಜಾಮೀನು ನೀಡಲು ಆಧಾರವಾಗದು ಎಂದು ಹೈಕೋರ್ಟ್ ಹೇಳಿದೆ. ಆ ಮೂಲಕ ಅತ್ಯಾಚಾರ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಜಾಮೀನು ಕೋರಿ ಆರೋಪಿ ಹೊಲಿಯಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಪರಾಧವು ಗಂಭೀರ ಸ್ವರೂಪದ್ದಾಗಿದ್ದು, ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆರೋಪಿಗೆ ಜಾಮೀನು ಮಂಜೂರು ಮಾಡಲಾಗದು ಎಂದು ತಿಳಿಸಿದೆ.

ಅರ್ಜಿದಾರರು ಬಿ.ಎ- ಬಿ.ಇಡಿ ಪದವೀಧರರಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆ ಶೀಘ್ರದಲ್ಲಿ ನಡೆಯಲಿದೆ ಎಂಬುದು ಜಾಮೀನು ಪಡೆಯಲು ಆಧಾರವಾಗದು. ಕೊರೋನ ಹಿನ್ನೆಲೆಯಲ್ಲಿ ವಿಚಾರಣೆ ವಿಳಂಬವಾಗುತ್ತಿದೆ ಎಂಬ ಮಾತ್ರಕ್ಕೆ ಜಾಮೀನು ಕೋರುವುದು ಸಕಾರಣವಲ್ಲ. ಆರೋಪಿಯು ಜಾಮೀನು ಪಡೆಯಲು ಸಮರ್ಥ ಆಧಾರಗಳನ್ನು ನೀಡಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ.

ಇದೇ ವೇಳೆ ನ್ಯಾಯಾಲಯ ಜೈಲು ಅಧಿಕಾರಿಗಳ ಅನುಮತಿ ಪಡೆದು ಪರೀಕ್ಷೆ ಬರೆಯಲು ಆರೋಪಿ ಸ್ವತಂತ್ರರು ಎಂದು ನ್ಯಾಯಾಲಯ ತಿಳಿಸಿದೆ. ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪವನ್ನು ಅರ್ಜಿದಾರರು ಎದುರಿಸುತ್ತಿದ್ದಾರೆ. 2019ರಲ್ಲಿ ಸಂತ್ರಸ್ತೆಯು ವಿವಾಹವಾಗಿದ್ದು, ಪತಿಯೊಂದಿಗೆ ಜೀವಿಸುತ್ತಿದ್ದರು. ತಿಂಗಳ ಬಳಿಕ ಆರೋಪಿ ಹೊಲಿಯಪ್ಪ ಲೈಂಗಿಕ ಸಂಪರ್ಕ ಹೊಂದುವಂತೆ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. 2019ರ ಮಾ.28ರಂದು ಸಂತ್ರಸ್ತೆಯು ಬಹಿರ್ದೆಸೆಗೆ ತೆರಳಿದ್ದಾಗ ಆಕೆಯನ್ನು ಹಿಂಬಾಲಿಸಿದ್ದ ಆರೋಪಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.

ಇದರ ಆಧಾರದಲ್ಲಿ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ಇದರ ಬೆನ್ನಿಗೇ ಆರೋಪಿಯು ಕಳೆದ ವರ್ಷದ ಹೈಕೋರ್ಟ್ ನಲ್ಲಿ ಜಾಮೀನು ಮನವಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ವಜಾ ಮಾಡಿತ್ತು. ಈಗ ಮತ್ತೆ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮೊದಲ ಜಾಮೀನು ಮನವಿಯಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿಲ್ಲ. ಅದು ಒಪ್ಪಿತ ಲೈಂಗಿಕ ಕ್ರಿಯೆಯಾಗಿತ್ತು ಎಂದು ಆರೋಪಿ ಹೇಳಿದ್ದರು. ಈಗ ತಾನು ಬಿ.ಎ- ಬಿ.ಇಡಿ ಪದವೀಧರನಾಗಿದ್ದು, ಶಿಕ್ಷಕ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ದೇಶ ಹೊಂದಿದ್ದೇನೆ. ತನ್ನನ್ನು ಜೈಲಿನಲ್ಲಿಟ್ಟರೆ ಸಿದ್ಧತೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ ಎಂದು ಅವರು ಹೇಳಿದ್ದರು. ಕೋವಿಡ್ ಮತ್ತು ಅದರ ಮಾರ್ಗಸೂಚಿಗಳು ಜಾರಿಯಲ್ಲಿರುವುದರಿಂದ ಪ್ರಕರಣದ ವಿಚಾರಣೆ ತಡವಾಗಬಹುದು ಎಂದು ವಾದಿಸಿದ್ದು, ಅದರ ಆಧಾರದಲ್ಲಿ ಜಾಮೀನು ಕೋರಿದ್ದಾರೆ.

ಇದಕ್ಕೆ ಸರಕಾರಿ ಪರ ವಕೀಲರು ವಿರೋಧಿಸಿದ್ದು, ಜಾಮೀನು ಮನವಿ ತಿರಸ್ಕರಿಸುವಂತೆ ಕೋರಿದರು. ವಕೀಲರ ವಾದ ಆಲಿಸಿದ ಪೀಠವು ಆರೋಪಿಸಲಾದ ಅಪರಾಧ ಹೇಯವಾಗಿರುವುದರಿಂದ ಜಾಮೀನು ಮಂಜೂರು ಮಾಡಲಾಗದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News