ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಶಿವಮೊಗ್ಗದಲ್ಲಿ ಕಪ್ಪು ಪಟ್ಟಿ ಧರಿಸಿ ವೈದ್ಯರ ಪ್ರತಿಭಟನೆ
ಶಿವಮೊಗ್ಗ, ಜೂ.18: ವೈದ್ಯರ ಮೇಲಾಗುತ್ತಿರುವ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕಪ್ಪು ಪಟ್ಟಿ ಧರಿಸಿ ಐಎಂಎ ಆವರಣದಲ್ಲಿ ಪ್ರತಿಭಟನೆ ಸಭೆ ನಡೆಸಿತು.
2021ರ ಜೂನ್ 18 ರಂದು, ದೇಶಾದ್ಯಂತ ಭಾರತೀಯ ವೈದ್ಯ ಸಂಘ ಈ ದಿನವನ್ನು 'ರಾಷ್ಟ್ರೀಯ ಪ್ರತಿಭಟನಾ ದಿನ’ವಾಗಿ ಆಚರಿಸುತ್ತಿದೆ. ಇಡೀ ದೇಶಾದ್ಯಂತ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಈ ಹಿಂಸೆಯ ಘಟನೆಗಳನ್ನು ನೋಡಿ ನಮಗೆಲ್ಲಾ ತುಂಬಾ ನೋವಾಗಿದೆ. ಅಸ್ಸಾಂನಲ್ಲಿ ನಮ್ಮ ಯುವ ವೈದ್ಯರ ಮೇಲೆ ಕ್ರೂರ ಹತ್ಯೆಯಾಗಿದೆ ಮತ್ತು ಮಹಿಳಾ ವೈದ್ಯರ ಮೇಲೆ ಅನುಭವಿ ವೈದ್ಯರ ಮೇಲೆ ಕ್ರೂರ ಹಲ್ಲೆಗಳು ವೃತ್ತಿ ನಿರತ ವೈದ್ಯರಲ್ಲಿ ಮಾನಸಿಕ ಆಘಾತವನ್ನು ಉಂಟುಮಾಡುತ್ತಿವೆ ಎಂದು ಆರೋಪಿಸಿದರು.
ಆಧುನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣವನ್ನು ಕಲ್ಪಿಸಬೇಕು. ವೈದ್ಯರ ಮೇಲಾಗುತ್ತಿರುವ ದೈಹಿಕ ಹಲ್ಲೆಗಳು ನಿಲ್ಲಬೇಕು ಮತ್ತು ಈ ಮುಷ್ಕರವನ್ನು ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾಡುತ್ತಿದ್ದೇವೆ. ನಮ್ಮ ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಡಾ.ಪರಮೇಶ್ವರ ಶಿಗ್ಗಾಂವಿ, ಡಾ.ಶಂಭುಲಿಂಗ, ಡಾ.ಕೆ.ಬಿ.ಶೇಖರ್, ಡಾ.ರಾಹುಲ್ ನವೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.