ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದರೂ ನಿಲ್ಲದ ಅವಾಂತರ: ಅಲ್ಲಲ್ಲಿ ಮನೆ, ಭೂ ಕುಸಿತ

Update: 2021-06-18 18:20 GMT

ಚಿಕ್ಕಮಗಳೂರು, ಜೂ.18: ಕಾಫಿನಾಡಿನಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಮಳೆ ಗಾಳಿಯಿಂದ ಉಂಟಾಗಿರುವ ಅನಾಹುತಗಳು ಮುಂದುವರಿದಿವೆ. ಜಿಲ್ಲೆಯ ಮಲೆನಾಡು ಭಾಗದ ಅಲ್ಲಲ್ಲಿ ಮಳೆ, ಗಾಳಿಗೆ ಮನೆ ಕುಸಿತ, ಭೂ ಕುಸಿತದಂತಹ ಘಟನೆಗಳು ಶುಕ್ರವಾರವೂ ಮುಂದುವರಿದಿವೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದಿದೆ. ಆದರೆ ಮಧ್ಯಾಹ್ನದ ವೇಳೆಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು. ಮಳೆ ಕಡಿಮೆಯಾದರೂ ಮಲೆನಾಡಿನ ಅಲ್ಲಲ್ಲಿ ಭೂ ಕುಸಿತ, ಮನೆ ಕುಸಿತದಂತಹ ಅವಘಡಗಳು ಮುಂದುವರಿದಿದ್ದು, ಕಳಸ ಪಟ್ಟಣ ಸಮೀಪದ ಇಡಕಣಿ ಗ್ರಾಮ ಪಂಚಾಯತ್‍ಗೆ ಸೇರಿರುವ ಹೆಮ್ಮಕ್ಕಿ ಗ್ರಾಮದಲ್ಲಿ ದಲಿತ ಸಮುದಾಯದ ಮಹಿಳೆಯೊಬ್ಬರ ಮನೆ ಶುಕ್ರವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ.

ಮನೆಯಲ್ಲಿದ್ದ ವಸ್ತುಗಳು ಮಣ್ಣಿನಡಿಗೆ ಸಿಲುಕಿಕೊಂಡಿದ್ದು, ಮಕ್ಕಳು ಸೇರಿದಂತೆ ಮನೆಮಂದಿ ಟಾರ್ಪಲ್‍ನಿಂದ ನಿರ್ಮಿಸಲಾದ ಗುಡಿಸಲಿನಲ್ಲಿ ಸದ್ಯ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದಲ್ಲಿ ಬಸ್ ನಿಲ್ದಾಣವೊಂದು ಕುಸಿದು ಬಿದ್ದಿದೆ. ಬಸ್‍ ನಿಲ್ದಾಣದಲ್ಲಿದ್ದ ಅಂಚೆಕಚೇರಿ, ಕಟಿಂಗ್ ಶಾಪ್ ಜಖಂಗೊಂಡಿದೆ.

ಕಳೆದ ಎರಡು ವರ್ಷಗಳ ಹಿಂದೆ ಉಂಟಾದ ಅತಿವೃಷ್ಟಿ ಸಂದರ್ಭದಲ್ಲಿ ಕಳಸ ಸಮೀಪದ ಬಿಳಗೋಡು ಎಂಬಲ್ಲಿ ಧರೆ ಕುಸಿದು ಕುದುರೆಮುಖ ಸಂಪರ್ಕ ರಸ್ತೆಗೆ ಜಾರಿತ್ತು. ಕಳೆದ ಕೆಲ ತಿಂಗಳ ಹಿಂದೆಯಷ್ಟೆ ಅಲ್ಲಿಗೆ ತಡೆಗೋಡೆಯನ್ನು ಕಟ್ಟಲಾಗಿತ್ತು. ಆದರೆ ಇದೇ ಸ್ಥಳದಲ್ಲಿ ಮತ್ತೆ ಧರೆ ಕುಸಿದಿದ್ದು, ಧರೆ ಪಕ್ಕದಲ್ಲಿದ್ದ ತೋಟವೊಂದರ ಅಡಿಕೆ ಮರಗಳು ಮಣ್ಣು ಪಾಲಾಗಿವೆ. ಕಳಸ-ಕುದುರೆಮುಖ ರಸ್ತೆಗೆ ಮಣ್ಣು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಹೊರನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ತಿನ ಬಿಳಲು ಪ್ರೇಮಾ ಎಂಬವರ ಮನೆಯ ಹಿಂಬದಿಯ ಗುಡ್ಡ ಜರಿದು ಬಿದ್ದು ಮನೆಗೆ ಹಾನಿಯಾಗಿದೆ. ಹೊರನಾಡು-ಮೆಣಸಿನಹಾಡ್ಯ ರಸ್ತೆಯುದ್ದಕ್ಕೂ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಗುಡ್ಡಗಳು ಕುಸಿಯುತ್ತಿವೆ. ಹೊರನಾಡು ಬಲಿಗೆ ಸಂಪರ್ಕ ರಸ್ತೆಯಲ್ಲಿ ಎರಡೂ ಬದಿಗಳಲ್ಲಿ ರಸ್ತೆಯ ಅಂಚುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ. ಕಳಸ ತಾಲೂಕಿನಲ್ಲಿ ಹರಿಯುವ ಭದ್ರಾನದಿ, ಸೋಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಶುಕ್ರವಾರ ಮಳೆಯ ಪ್ರಮಾಣ ಕಡಿಮೆ ಆಗಿರುವ ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಮಟ್ಟ ಕೊಂಚ ತಗ್ಗಿದೆ. ಮಳೆ ಇಳಿಕೆಯಾಗಿರುವ ಪರಿಣಾಮ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮಳುಗಡೆಯಾಗುವ ಭೀತಿ ತಪ್ಪಿದೆಯಾದರೂ ಸೇತುವೆ ಮಣ್ಣಿನ ರಾಶಿ ಸಂಗ್ರಹವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನು ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ಸುಬ್ಬಯ್ಯ ಎಂಬವರ ಮನೆಯ ಗೋಡೆ ಶುಕ್ರವಾರ ಬೆಳಗ್ಗೆ ಕುಸಿದಿದ್ದರೆ, ಕೊಟ್ಟಿಗೆಹಾರದ ರಾಮನಗರ ನಿವಾಸಿ ರತ್ನಮ್ಮ ಎಂಬವರ ಮನೆ ಭಾರೀ ಗಾಳಿಗೆ ಹಾರಿ ಹೋಗಿದ್ದು, ಹೆಸ್ಗಲ್ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿರುವ ಬಗ್ಗೆ ವರದಿಯಾಗಿದೆ. 

ಶೃಂಗೇರಿ ತಾಲೂಕಿನಲ್ಲಿ ನೆಮ್ಮಾರ್ ಗ್ರಾಮದ ಕಾರೇಬೈಲ್ ಗ್ರಾಮದಲ್ಲಿ ಧರೆ ಕುಸಿದು ಚಂದ್ರಶೇಖರ್ ಭಟ್ ಎಂಬವರ ಮನೆಗೆ ಹಾನಿಯಾಗಿದ್ದರೆ, ನೀಲಂದೂರಿನಲ್ಲಿ ಪ್ರದೀಪ್ ಎಂಬವರ ಮನೆ ಹಾಗೂ ಛಾವಣಿಗೆ ಹಾನಿಯಾಗಿದೆ. ಉಳಿದಂತೆ ಮಲೆನಾಡು ಭಾಗದಲ್ಲಿರುವ ಗುಡ್ಡೆತೋಟ, ಕಿಗ್ಗಾ, ಬೇಗಾರು, ಅಬ್ಬಿಕಲ್ಲು, ಅತ್ತಿಕುಡಿಗೆ, ಜಯಪುರ, ಬಸರೀಕಟ್ಟೆ ಮತ್ತಿತರ ಗ್ರಾಮಗಳಲ್ಲಿ ರಸ್ತೆ ಮೇಲೆ ಮರಗಳು, ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಮಲೆನಾಡು ಭಾಗದಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಮಳೆ ಇಳಿಕೆಯಾಗಿರುವುದರಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನಲ್ಲಿ ಕೊಂಚ ಇಳಿಕೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News