ಡಿಕೆಶಿ, ಸಿದ್ದರಾಮಯ್ಯ ಮೊದಲು ಶಾಸಕರಾಗಿ ಗೆದ್ದು ಬರಲಿ: ಸಚಿವ ಈಶ್ವರಪ್ಪ ಸವಾಲು

Update: 2021-06-20 14:04 GMT

ಶಿವಮೊಗ್ಗ,ಜೂ.20: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮೊದಲು ಶಾಸಕರಾಗಿ ಗೆದ್ದು ಬರಲಿ, ಆಮೇಲೆ ಮುಖ್ಯಮಂತ್ರಿ ಆಗುವ ಕನಸು ಕಾಣಲಿ ಎಂದು ಸಚಿವ ಕೆ‌.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮೊದಲು ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಗೆದ್ದು ಬರಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್​ನವರು ಐದು ವರ್ಷ ಹಂಗೋ ಹಿಂಗೋ ಅಧಿಕಾರ ನಡೆಸಿದರು. ನಂತರ ಜನ ಈ ಸರ್ಕಾರ ಬೇಡ ಎಂದು ಅವರನ್ನು ಸೋಲಿಸಿದರು. ಸಿದ್ದರಾಮಯ್ಯನವರು ಸಹ ಚಾಮುಂಡಿ ಕ್ಷೇತ್ರದಲ್ಲಿ ಸೋತರು. ಕಾಂಗ್ರೆಸ್​ನ ಹಲವು ನಾಯಕರು, ಶಾಸಕರು ಸೋತರೂ ಸಹ ಮುಖ್ಯಮಂತ್ರಿ ಆಗುವ ಕನಸು ಇನ್ನೂ ಅವರಿಗೆ ಬೀಳುತ್ತಿದೆ. ಹಾಗಾಗಿ ಈಗ ಇಬ್ಬರೂ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಮೊದಲು ಶಾಸಕರಾಗಿ ಗೆದ್ದು ಬರಲಿ ನೋಡೋಣ ಎಂದು ತಿರುಗೇಟು ನೀಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ಎನ್ನುವ ಪ್ರಶ್ನೆಯೇ ಇಲ್ಲ. ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರ ನೇತೃತ್ವದಲ್ಲಿ ಆಡಳಿತ ನಡೆಸುತ್ತೇವೆ ಹಾಗೂ ಮುಂದಿನ ಚುನಾವಣೆಯಲ್ಲಿ ಸಹ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಅರುಣ್ ​ಸಿಂಗ್ ಅವರು ಬರುವ ಮುಂಚೆ ಕೆಲವು ಸಣ್ಣ-ಪುಟ್ಟ ಗೊಂದಲಗಳು ಇತ್ತು. ಅವರು ಬಂದು ಹೋದ ನಂತರ ಯಾವುದೇ ಗೊಂದಲಗಳಿಲ್ಲ. ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದರು.

ರಾಜ್ಯದ ಅಭಿವೃದ್ಧಿ ಹಾಗೂ ಸಂಘಟನೆಯ ಬಗ್ಗೆ ಗಮನಿಸಿ ಎಂದು ಕೇಂದ್ರದಿಂದ ಸೂಚನೆ ಬಂದಿದೆ. ಅದರಂತೆ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದರು.

ವಿಶ್ವನಾಥ್ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಹೇಳಿಕೆ ಗಮನಿಸಿದ್ದೇವೆ. ರಾಜ್ಯಾಧ್ಯಕ್ಷರು ನೋಟಿಸ್ ನೀಡುವ ತಿರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News