ಶಿವಮೊಗ್ಗ: ಸಚಿವ ಈಶ್ವರಪ್ಪರ ಕಚೇರಿಯ ಮುಂದೆ ಚೀಲ ಸುಟ್ಟು ಜನಾಗ್ರಹ ಆಂದೋಲನ ಪ್ರತಿಭಟನೆ

Update: 2021-06-22 13:23 GMT

ಶಿವಮೊಗ್ಗ,ಜೂ.22: ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕಿಡಾದ ಜನರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕೆಂದು ಆಗ್ರಹಿಸಿ ಜನಾಗ್ರಹ ಆಂದೋಲನದ ಪ್ರಮುಖರು ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಚೇರಿಯ ಮುಂದೆ ಚೀಲಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕೋವಿಡ್ ಸಂದರ್ಭದಲ್ಲಿ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಅದರಲ್ಲೂ 2ನೇ ಅಲೆಯು ಅಪ್ಪಳಿಸಿ ಜನರ ಬದುಕ್ಕನೇ ನಾಶ ಮಾಡಿದೆ. ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಂಡಿಲ್ಲ. ಜೊತೆಗೆ ಸರ್ಕಾರ ಮಾಡಿದ ಖರ್ಚು ಎಷ್ಟು, ಸಂಪನ್ಮೂಲ ಕ್ರೋಡೀಕರಣಕ್ಕೆ ಇರುವ ಮಾರ್ಗಗಳೇನು ಎಂದು ಪ್ರಶ್ನೆ ಕೇಳುತ್ತಲೇ, ಸಲಹೆ ನೀಡುತ್ತಲೇ ಪ್ರತಿಭಟನೆ ಮೂಲಕ ಎಚ್ಚರಿಸುತ್ತಿದ್ದೇವೆ. ಆದರೂ ಕೂಡ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಲಾಕ್‌ಡೌನ್ ಮುಗಿದರೂ ಸಂಕಷ್ಟಗಳು ತಪ್ಪಿದಲ್ಲ. ತಕ್ಷಣವೇ ಎಲ್ಲರಿಗೂ ದುಡಿಮೆ ಸಿಗುವುದಿಲ್ಲ. ಜನರನ್ನು ಮನೆಯೊಳಗೆ ಕೂಡಿಡುವುದು ಅಷ್ಟೆ ಸರ್ಕಾರದ ಕೆಲಸವಲ್ಲ. ಅವರಿಗೆ ನೆರವನ್ನು ನೀಡಬೇಕಾಗಿದೆ. ಇದುವರೆಗೂ ಕೆಲವು ಕೆಲಸಗಳು ಆಗಿರಬಹುದು. ಆದರೆ ಮತ್ತಷ್ಟು ಕೆಲಸ ಆಗಬೇಕಾಗಿದೆ ಎಂದು ಒತ್ತಾಯಿಸಿದರು.

ಬಿಪಿಎಲ್ ಕಾರ್ಡ್ ಹೊಂದಿದ್ದ ಎಲ್ಲರಿಗೂ ಸಮಗ್ರ ದಿನಸಿ ಕಿಟ್ ನೀಡಬೇಕು. ಕನಿಷ್ಠ 5 ಸಾವಿರ ರೂ. ಆರ್ಧಿಕ ನೆರವು ನೀಡಬೇಕು. ಅನಾಥ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ರೈತರಿಗೆ ಬೀಜ ಗೊಬ್ಬರಕ್ಕೆ ಸಬ್ಸಿಡಿ ನೀಡಬೇಕು. ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗಬೇಕು. ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಹಾಕಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜನಾಗ್ರಹ ಆಂದೋಲನದ ಪ್ರಮುಖರಾದ ಹೆಚ್.ಆರ್.ಬಸವರಾಜಪ್ಪ, ಕೆ.ಎಲ್.ಅಶೋಕ್, ಹಾಲೇಶಪ್ಪ, ಹೆಚ್.ಎಂ.ಯೋಗೀಶ್, ಅನನ್ಯ ಶಿವು, ಶಿವಮೂರ್ತಿ, ಚಂದ್ರು, ರಾಘವೇಂದ್ರ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News