ಶಬ್ದ ಮಾಲಿನ್ಯ ನಿಯಂತ್ರಣ ಕುರಿತು ವರದಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಜೂ.22: ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿದೆ. ರಾಜ್ಯಕ್ಕೆ ಎಷ್ಟು ಶಬ್ದ ಮಾಲಿನ್ಯ ಮಾಪಕಗಳ ಅಗತ್ಯವಿದೆ? ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನ್ಯಾಯಪೀಠವು ಹೇಳಿದೆ.
ಶಬ್ದಮಾಲಿನ್ಯದ ಪ್ರಮಾಣ ತಿಳಿದುಕೊಳ್ಳಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಮಾಪಕ ಬೇಕು ಎಂದು ಕೋರ್ಟ್ ಪ್ರಶ್ನಿಸಿತು. ಬೆಂಗಳೂರಿನ ಪ್ರತಿ ಪೊಲೀಸ್ ಠಾಣೆಗೆ 2 ಶಬ್ದಮಾಪಕ ಅಗತ್ಯವಿದೆ. ಗ್ರಾಮೀಣ ಭಾಗದ ಠಾಣೆಗಳಿಗೆ ತಲಾ ಒಂದು ಶಬ್ದಮಾಪಕ ಬೇಕಿದೆ. ಶಬ್ದ ಮಾಲಿನ್ಯ ಮಾಪಕ ಇಲ್ಲದಿರುವುದರಿಂದ ನಿಯಮ ಪಾಲನೆ ಸಾಧ್ಯವಾಗುತ್ತಿಲ್ಲ. ಇದನ್ನು ಪೊಲೀಸ್ ಮಹಾನಿರ್ದೇಶಕರು ಗಮನಿಸಬೇಕು. ಕಾಯ್ದೆ ಜಾರಿಯಾದ 20 ವರ್ಷಗಳ ಬಳಿಕ ಮಾಪಕ ಖರೀದಿಸಲಾಗುತ್ತಿದೆ. ವಿಳಂಬ ನೀತಿಯ ಮೂಲಕ ಸರಕಾರ ಇತಿಹಾಸ ಸೃಷ್ಟಿಸಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.