ಸಚಿವ ಆರ್.ಅಶೋಕ್ ಕಚೇರಿ ಸಮೀಪದಲ್ಲಿದ್ದ ದೇವಸ್ಥಾನದ ಕಟ್ಟಡ ಕೆಡವಿದ ಬಿಬಿಎಂಪಿ

Update: 2021-06-23 17:19 GMT

ಬೆಂಗಳೂರು, ಜೂ.23: 40 ವರ್ಷಗಳಿಂದ ಭವ್ಯವಾಗಿ ನೆಲೆ ನಿಂತಿದ್ದ ದೇವಸ್ಥಾನದ ಜಾಗವನ್ನು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ಬಿಬಿಎಂಪಿ ಅಧಿಕಾರಿಗಳು ಅಪಾರ್ಟ್‌ಮೆಂಟ್ ಕಟ್ಟಲು ಕೆಡವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಂದಾಯ ಸಚಿವ ಆರ್.ಅಶೋಕ್ ಅವರ ಕಚೇರಿ ಸಮೀಪದ ಬನಶಂಕರಿ ಎರಡನೇ ಹಂತದ ಯಾರಬ್ ನಗರದ 9ನೇ ಮುಖ್ಯ ರಸ್ತೆಯಲ್ಲಿ ನಾಲ್ಕು ದಶಕಗಳ ಹಿಂದೆ ಗಣಪತಿ ದೇವಸ್ಥಾನ ನಿರ್ಮಿಸಲಾಗಿತ್ತು. ದೇವಾಲಯದ ಹಿಂಬಾಗದಲ್ಲಿ 40 ವರ್ಷಗಳ ಹಿಂದೆಯೇ ಪ್ರಸಾದ ಮಂದಿರವನ್ನು ನಿರ್ಮಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ದೇವಸ್ಥಾನದ ಜಾಗ ಯಾವುದೇ ಸಮಸ್ಯೆ ಇಲ್ಲದೇ ನಡೆದುಕೊಂಡು ಬರುತ್ತಿದೆ. ಆದರೆ ಈ ಪ್ರಸಾದ ಮಂದಿರವನ್ನು ತೆರವುಗೊಳಿಸಿ ಜಾಗವನ್ನು ತಮ್ಮ ವಶಕ್ಕೆ ನೀಡುವಂತೆ ಪಕ್ಕದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿರುವ ಕೆಲವು ಪ್ರಭಾವಿಗಳು ದೇವಸ್ಥಾನದ ಟ್ರಸ್ಟಿಗಳ ಮೇಲೆ ಒತ್ತಡ ಹೇರಿದ್ದರು. ಆದರೆ ಇದಕ್ಕೆ ಆಡಳಿತ ಮಂಡಳಿ ಒಪ್ಪಿರಲಿಲ್ಲ ಎನ್ನಲಾಗಿದೆ.

ಇದೀಗ ಬಿಬಿಎಂಪಿ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಕೋವಿಡ್ ಸಂದರ್ಭದಲ್ಲಿ ಅತ್ಯಂತ ವ್ಯವಸ್ಥಿತವಾಗಿ ದೇವಸ್ಥಾನದ ಪ್ರಸಾದ ಮಂದಿರವನ್ನು ಕೆಡವಿದ್ದಾರೆ. ಇದನ್ನು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿ ದೇವಸ್ಥಾನದ ಜಾಗಕ್ಕೆ ಹಾನಿ ಮಾಡಿದ್ದಾರೆ. ಇಲ್ಲಿನ ನಾಗರಕಟ್ಟೆಗೂ ಹಾನಿಯಾಗಿದ್ದು, ಸಾರ್ವಜನಿಕರು ಬಳಸುವ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರವು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಲಾಗಿದೆ.

ಇಲ್ಲಿನ ಅರಳಿ ಮರ ಸೇರಿ ಇಡೀ ವಾತಾವರಣದ ಬಗ್ಗೆ ಸುತ್ತಮುತ್ತಲಿನ ಜನರಿಗೆ ವಿಶೇಷ ಗೌರವ ಮತ್ತು ಹೆಮ್ಮೆ ಇದೆ. ಬಿಬಿಎಂಪಿ ವರ್ತನೆ ಬಗ್ಗೆ ಆಕ್ರೋಶಗೊಂಡ ಸ್ಥಳೀಯರು ಗುಂಪುಗೂಡಿ ಗಲಾಟೆ ಮಾಡಿದ ಕಾರಣ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

''ನಮ್ಮ ಭಾವನೆಗಳ ಜತೆ ಚೆಲ್ಲಾಟ''

ವಿನಾಯಕ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಡಾ.ಎಂ.ಆರ್.ಸಾಕೇತ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ನಮ್ಮ ಹಿರಿಯರು ಈ ದೇವಸ್ಥಾನ ಕಟ್ಟಿಸಿದ್ದು, ಹಲವಾರು ಮಂದಿ ಇದರ ಆಡಳಿತ ಮಂಡಳಿಯ ಉಸ್ತುವಾರಿ ನೋಡಿಕೊಂಡು ಬಂದಿದ್ದಾರೆ. ಇದೀಗ ತಮ್ಮ ಕಾಲದಲ್ಲಿ ಪ್ರಸಾದ ಮಂದಿರದ ಜಾಗವನ್ನು ತಮಗೆ ಒಪ್ಪಿಸುವಂತೆ ಅಪಾರ್ಟ್‌ಮೆಂಟ್‍ನವರು ಒತ್ತಡ ಹೇರಿದ್ದರು. ಆದರೆ ನಾವು ಒಪ್ಪಿರಲಿಲ್ಲ. ಇದೀಗ ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ನಮ್ಮ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಾಗ ತೆರವು ಮಾಡುವಂತೆ ನೋಟಿಸ್ ನೀಡಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಮಗೆ ನೋಟಿಸ್ ತಲುಪಿಲ್ಲ. 40 ವರ್ಷಗಳಿಂದ ನಮಗೆ ಯಾವುದೇ ನೋಟಿಸ್ ನೀಡಿಲ್ಲ. ಈ ಜಾಗ ಎಂದೂ ವಿವಾದಕ್ಕೀಡಾಗಿರಲಿಲ್ಲ. ಇದೀಗ ಏಕಾಏಕಿ ಇವೆಲ್ಲಾ ಘಟನೆಗಳು ನಡೆಯುತ್ತಿವೆ. ಬಿಬಿಎಂಪಿ ಅಧಿಕಾರಿಗಳ ವರ್ತನೆ ಖಂಡನೀಯ ಎಂದು ಸಾಕೇತ್ ಕುಮಾರ್ ಹೇಳಿದರು.

ಸ್ಥಳೀಯರಾದ ವೆಂಕಟೇಶ್ ಮಾತನಾಡಿ, ಇದೆಲ್ಲವೂ ವಸತಿ ಸಮುಚ್ಚಯದವರ ಕಿತಾಪತಿಯಾಗಿದ್ದು, ದೇವಸ್ಥಾನದ ಜಾಗ ಕೆಡವಿರುವುದು ಅಕ್ಷ್ಯಮ್ಯ. ಈ ಜಾಗ ಸಚಿವ ಆರ್.ಅಶೋಕ್ ಅವರ ಮನೆಗೆ ಕೂಗಳತೆ ದೂರದಲ್ಲಿದ್ದು, ಸರಕಾರ ಮಧ್ಯ ಪ್ರವೇಶ ಮಾಡಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಡೆಯಬೇಕು. ಹಣದ ಆಸೆಗೆ ಶಾಮೀಲಾಗಿರುವ ಬಿಬಿಎಂಪಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News