×
Ad

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-06-25 17:51 IST

ಬೆಂಗಳೂರು, ಜೂ. 25: `ಗುಪುಗಾರಿಕೆ ಮಾಡಿ ಪಕ್ಷವನ್ನು ಹಾಳು ಮಾಡುವವರು ನಮಗೆ ಬೇಡವೇ ಬೇಡ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡುವ, ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ನಂಬಿ ಬರುವವರನ್ನು ಮಾತ್ರ ಕಾಂಗ್ರೆಸ್‍ಗೆ ಸೇರಿಸಿಕೊಳ್ಳಲಾಗುವುದು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಹಾಸನ ಜಿಲ್ಲೆ ಬೇಲೂರು ಪುರಸಭೆಗೆ ಆಯ್ಕೆ ಆಗಿರುವ ಕಾಂಗ್ರೆಸ್ ಸದಸ್ಯರನ್ನು ಅಭಿನಂದಿಸಿದ ಹಾಗೂ ಹಾಸನ ಜಿಲ್ಲೆಯ ಬೇರೆ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, `ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬ ಮಾತಿಗೆ' ಬೇಲೂರು ಪುರಸಭೆ ಫಲಿತಾಂಶವೇ ಸಾಕ್ಷಿ. ಇದನ್ನು ಕಾಂಗ್ರೆಸ್ ಪಕ್ಷದ ಎಲ್ಲರೂ ಅರಿತುಕೊಳ್ಳಬೇಕು' ಎಂದು ಬಣ್ಣಿಸಿದರು.

`ಕಾಂಗ್ರೆಸ್ ಕಚೇರಿ ದೇವಾಲಯವಿದ್ದಂತೆ. ದೇವಾಲಯಕ್ಕೆ ನಾವು ಹೋಗಿ ಪೂಜೆ ಮಾಡುವುದು ಏಕೆ? ನಮಗೆ ನೆಮ್ಮದಿ ಸಿಗಲಿ, ಕಷ್ಟ ನಿವಾರಣೆಯಾಗಿ ಶ್ರೇಯಸ್ಸು ಸಿಗಲಿ. ಭಕ್ತ ಹಾಗೂ ಭಗವಂತನಿಗೂ ಇರುವ ನಂಟಿನ ಸ್ಥಳ ದೇವಾಲಯ. ಯಾವುದೇ ಧರ್ಮವಾಗಿರಲಿ ದೇವರ ಮುಂದೆ ಪ್ರಾರ್ಥನೆ ಮಾಡುತ್ತೇವೆ. ಅದೇ ಕಾರಣಕ್ಕೆ ನಾನು ದೇವಾಲಯದಂತಿರುವ ನಮ್ಮ ಕಾಂಗ್ರೆಸ್ ಕಚೇರಿಯನ್ನು ಸ್ವಲ್ಪ ಬದಲಾವಣೆ ಮಾಡಿದ್ದೇನೆ. ಹಿಂದೆ ರುದ್ರೇಶ್ ಅವರು ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, ಅವರು ಈಗ ನಮ್ಮ ಜತೆ ಇಲ್ಲ. ನಾವೇ ಹೆಣ್ಣು ಮಗಳಿಗೆ ಒತ್ತಾಯ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೆವು. ಆದರೆ, ಅವರು ಹೋರಾಡಿ ಸೋತಿದ್ದಾರೆ. ಅದಕ್ಕೆ ನಾವು ಸೇರಿದಂತೆ ನಾನಾ ಕಾರಣಗಳಿರಬಹುದು. ಮುಂದೆ ನಾವು ಕಾರ್ಯಕರ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು' ಎಂದರು.

`ಎಷ್ಟು ಜನ ನನ್ನ ಸಂಪರ್ಕದಲ್ಲಿದ್ದಾರೆಂಬುದನ್ನು ಸದ್ಯಕ್ಕೆ ನಾನು ಹೇಳುವುದಿಲ್ಲ. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಬಿಜೆಪಿ ಶಾಸಕರಿಗೆ ಹಾಗೂ ಮಂತ್ರಿಗಳಿಗೆ ಮನವರಿಕೆಯಾಗಿದೆ. ಈ ಸಮಯದಲ್ಲಿ ಪಕ್ಷ ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತಂದು ಜನರಿಗೆ ಅನುಕೂಲ ಮಾಡಿಕೊಡಬೇಕು. ಜನರ ಹೃದಯ ಗೆಲ್ಲಲು ಬಿಜೆಪಿಯವರಿಗೆ ಎಂತಹ ಅವಕಾಶ ಸಿಕ್ಕಿತ್ತು. ಆದರೆ, ಅವರು ಜನರ ಹೃದಯ ಗೆಲ್ಲಲಿಲ್ಲ. ಬದಲಿಗೆ ಜನರಿಗೆ ಬೂದಿ ಕೊಟ್ಟರು. ಆಸ್ಪತ್ರೆ ಬಿಲ್ ಕೊಡಲು ಶಕ್ತಿ ಇಲ್ಲದವರನ್ನು ಸ್ಮಶಾನಕ್ಕೆ ಕಳುಹಿಸಿದರು' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

`ನಿಮ್ಮ ತಾಲೂಕಿನಲ್ಲಿ ಎಷ್ಟು ಜನ ಸತ್ತಿದ್ದಾರೆ, ಎಷ್ಟು ಜನ ಕೊರೋನ ಸೋಂಕಿನಿಂದ ನರಳುತ್ತಿದ್ದಾರೆ. ಎಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ, ಯಾರ ಪರಿಸ್ಥಿತಿ ಏನು ಎಂದು ನೀವು ತಂಡ ಮಾಡಿಕೊಂಡು ಮನೆ, ಮನೆಗೆ ಹೋಗಿ ವಾಸ್ತವಾಂಶ ತಿಳಿದುಕೊಂಡು ಧೈರ್ಯ ತುಂಬಬೇಕು. ಕೊರೋನದಿಂದ ತಮ್ಮವರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಬೇಕು. ನಾವು ಸರಕಾರಕ್ಕೆ ಒತ್ತಾಯ ಮಾಡಿ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿದ್ದೇವೆ. ಜನರಿಗೆ ಆನ್‍ಲೈನ್ ನೋಂದಣಿ ಗೊತ್ತಿಲ್ಲ. ಹೀಗಾಗಿ ಜನರ ನೋಂದಣಿಯನ್ನು ನೀವೇ ಮಾಡಿಸಬೇಕು. ಕೋವಿಡ್‍ನಿಂದ ಸತ್ತವರಿಗೂ ಪರಿಹಾರ ಸಿಗುವಂತೆ ಮಾಡಬೇಕು' ಎಂದು ಅವರು ಸೂಚಿಸಿದರು.

`ನಿಮ್ಮ ಜಿಲ್ಲೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತಿದೆ. ನೀವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪಕ್ಷದ ಸಿದ್ದಾಂತ ಹಾಗೂ ನಾಯಕತ್ವ ನಂಬಿ ಬರುವವರ ಪಟ್ಟಿಯನ್ನು ನೀವೆಲ್ಲಾ ಸೇರಿ ಕೊಡಿ. ಅದಕ್ಕಾಗಿ ಸಮಿತಿ ಇದೆ, ಅದರ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬೇರೆ ಪಕ್ಷದಿಂದ ಬಂದು ಗುಂಪುಗಾರಿಕೆ ಮಾಡುವವರು, ಪಕ್ಷ ಹಾಳು ಮಾಡುವವರು ನಮಗೆ ಬೇಡ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡುವವರನ್ನು ಮಾತ್ರ ಸೇರಿಸಿಕೊಳ್ಳಿ. ಪದಾಧಿಕಾರಿಗಳ ಪೈಕಿ ಯಾರು ಕಾರ್ಯಪ್ರವೃತ್ತವಾಗಿಲ್ಲ, ಅವರನ್ನು ಬದಲಾಯಿಸುತ್ತೇವೆ' ಎಂದು ಹೇಳಿದರು.

ಪ್ರತಿ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚಿಸಿ ವಿದ್ಯಾರ್ಥಿಗಳು, ಮಹಿಳೆಯರು, ಯುವಕರು, ಹಿಂದುಳಿದವರು ಎಲ್ಲರಿಗೂ ಪ್ರಾತಿನಿಧ್ಯ ನೀಡಬೇಕು. ಹೀಗಾಗಿ ಎಲ್ಲ ಘಟಕಗಳ ಸಮಿತಿ ಮಾಡಬೇಕಾಗುತ್ತದೆ. ನಿಮ್ಮಲ್ಲಿ ಯಾವುದೇ ಕಾರಣಕ್ಕೂ ಗೊಂದಲ ಆಗಬಾರದು. ನೀವ್ಯಾರೂ ಅದಕ್ಕೆ ಅವಕಾಶ ಕೊಡಬಾರದು. ನಾವು ಒಂದು ಹಂತದವರೆಗೂ ನೋಡುತ್ತೇವೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಫಾಲೋವರ್ ಆಗಬೇಕು. ರಾಹುಲ್ ಗಾಂಧಿ ಅವರು ಹೇಳಿದ ಮಾತಿನಂತೆ ಕಾಂಗ್ರೆಸ್ ಧ್ವಜವೇ ನಮ್ಮ ಧರ್ಮ ಎಂಬುದು ನಿಮ್ಮ ತಲೆಯಲ್ಲಿ ಇರಲಿ. ಗಾಂಧಿ ಕುಟುಂಬದಲ್ಲಿ ಮಾತ್ರ ಇಂತಹ ದೊಡ್ಡ ಹಾಗೂ ತ್ಯಾಗದ ತೀರ್ಮಾನ ಬರಲು ಸಾಧ್ಯ. ಆ ಪಕ್ಷ ಹಾಗೂ ನಾಯಕತ್ವದಲ್ಲಿ ಕೆಲಸ ಮಾಡುವಾಗ ನಾವು ಅದನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಪಕ್ಷದ ಮೇಲೆ ನಂಬಿಕೆ ಇಟ್ಟು ಸೇರ್ಪಡೆಯಾಗುತ್ತಿರುವವರಿಗೆ ಅಭಿನಂದನೆಗಳು' ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News