ಕಾಂಗ್ರೆಸ್, ಬಿಜೆಪಿಗೆ ಇಲ್ಲದ ನಿಬಂಧನೆ ಜೆಡಿಎಸ್ ಗೆ ಮಾತ್ರ ಏಕೆ?: ಪ್ರತಿಭಟನೆಗೆ ಅನುಮತಿ ನಿರಾಕರಣೆಗೆ ನಿಖಿಲ್ ಆಕ್ರೋಶ
ಬೆಂಗಳೂರು, ಜೂ. 27: `ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ನಾಳೆ(ಜೂ.28) ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ, ಕೋವಿಡ್ ನಿಯಮಾವಳಿ ಮುಂದಿಟ್ಟು ಸರಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಕೋವಿಡ್ ಸಂದರ್ಭದ ಸರಕಾರದ ಈ ನಿರ್ಧಾರ ಒಪ್ಪುತ್ತೇವೆ. ಆದರೆ, ಬಿಜೆಪಿ, ಕಾಂಗ್ರೆಸ್ ಸಮಾರಂಭಗಳಿಗೆ ಇಲ್ಲದ ನಿಬಂಧನೆ ಜನತಾದಳಕ್ಕೆ ಮಾತ್ರ ಏಕೆ?' ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಅವರು, ಸಮಾವೇಶ, `ಹೋರಾಟಗಳಂಥ ಜನರನ್ನು ಒಟ್ಟುಗೂಡಿಸುವ ಕೆಲಸಗಳಿಂದ ಜೆಡಿಎಸ್ ಈ ಕೋವಿಡ್ ಕಾಲದಲ್ಲಿ ದೂರವೇ ಉಳಿದಿತ್ತು. ಜನರನ್ನು ರಕ್ಷಣೆ ಮಾಡುವುದು ನಮ್ಮ ನಿಲುವಾಗಿತ್ತು. ಈಗ ಲಾಕ್ಡೌನ್, ಕೋವಿಡ್ ನಿಯಮಗಳನ್ನು ಸರಕಾರವೇ ಸಡಿಲಗೊಳಿಸಿದೆ. ಹೀಗಾಗಿಯೇ, ಬೆಲೆ ಏರಿಕೆಯಂಥ ಸಮಸ್ಯೆಯಿಂದ ಪರಿಹಾರ ಕೊಡಿಸಲು ಜೆಡಿಎಸ್ ಹೋರಾಟ ಹಮ್ಮಿಕೊಂಡಿತ್ತು' ಎಂದು ಅವರು ತಿಳಿಸಿದ್ದಾರೆ.
`ಕೋವಿಡ್ ನಿಯಮಾವಳಿಗಳಿಗೆ ಬದ್ಧವಾಗಿ ಪ್ರತಿಭಟನೆ ನಡೆಸಬೇಕೆಂದು ಪಕ್ಷದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರಿಗೆ ತಿಳಿಸಿದ್ದೆ. ಸಭೆಯ ನಂತರ ಮಾಧ್ಯಮಗಳಿಗೂ ಇದನ್ನೇ ಹೇಳಿದ್ದೆ. ಅನುಮತಿ ಕೋರಿ ಸಲ್ಲಿಸಿದ್ದ ಪತ್ರದಲ್ಲೂ ಅದನ್ನೇ ಉಲ್ಲೇಖಿಸಲಾಗಿತ್ತು. ಆದರೂ, ಅನುಮತಿ ಸಿಕ್ಕಿಲ್ಲ. ಈ ಮೂಲಕ ಸರಕಾರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದೆ' ಎಂದು ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ.
`ಕೋವಿಡ್ ನಿಯಮಾವಳಿಗಳು ಕಠಿಣವಾಗಿದ್ದಾಗ, ಲಾಕ್ಡೌನ್ ಜಾರಿಯಲ್ಲಿದ್ದಾಗಲೂ ಬಿಜೆಪಿ, ಕಾಂಗ್ರೆಸ್ ಹಲವು ಸಭೆ ಸಮಾರಂಭಗಳನ್ನು ನಡೆಸಿವೆ. ತೈಲ ದರ ಏರಿಕೆ ವಿರೋಧಿಸಿ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಗೆ ತರಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಲಾಕ್ಡೌನ್ ವೇಳೆ ಪ್ರತಿಭಟನೆ ನಡೆಸಿತ್ತು. ಆಗ ಕಾಂಗ್ರೆಸ್ಗಿದ್ದ ಅನುಮತಿ ಈಗ ನಮಗೇಕಿಲ್ಲ' ಎಂದು ಅವರು ಪ್ರಶ್ನಿಸಿದ್ದಾರೆ.
`ಪೆಟ್ರೋಲಿಯಂ ಅನ್ನು ಜಿಎಸ್ಟಿಗೆ ತಂದು ರಾಜ್ಯಗಳ ಆದಾಯವನ್ನು ಕೇಂದ್ರಕ್ಕೆ ತಿರುಗಿಸುವುದು ಬಿಜೆಪಿ ಕಾಂಗ್ರೆಸ್ ವಾದ. ಇದಕ್ಕೆ ಪೂರಕವಾದ ಕಾಂಗ್ರೆಸ್ ಪ್ರತಿಭಟನೆಗೆ ಅನುಮತಿ ನೀಡಲಾಯಿತು. ಪೆಟ್ರೋಲಿಯಂ ಅನ್ನು ಜಿಎಸ್ಟಿಗೆ ತರಬಾರದೆಂಬ ನಿಲುವುಳ್ಳ ನಮ್ಮ ಹೋರಾಟವನ್ನು ತಡೆಯಲಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆ ವಿರೋಧಿಗಳೆಂಬುದು ಸಾಬೀತಾಗಿದೆ' ಎಂದು ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ.