ಉಡುಪಿಯ ಕಲ್ಮತ್ ಮಸೀದಿ ಜಾಗವನ್ನು ವಾಪಸ್ ನೀಡಲು ಎಸ್ಡಿಪಿಐ ಆಗ್ರಹ
ಬೆಂಗಳೂರು, ಜೂ.28: ಉಡುಪಿ ಸಮೀಪದ ಕೊಡವೂರು ಎಂಬಲ್ಲಿನ ಕಲ್ಮತ್ ಮಸೀದಿಯ ಜಾಗವನ್ನು ಕಂದಾಯ ಇಲಾಖೆ ವಶಪಡಿಸಿಕೊಂಡಿದೆ. ಹಲವಾರು ವರ್ಷಗಳಿಂದ ಮಸೀದಿಯ ವಶದಲ್ಲಿದ್ದ ಈ ಆಸ್ತಿ ವಕ್ಫ್ ಇಲಾಖೆಯಲ್ಲಿ ನೋಂದಾವಣೆಗೊಂಡಿದ್ದವು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ)ದ ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಮ್ ಹಸನ್ ತಿಳಿಸಿದ್ದಾರೆ.
ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಮತ್ತು ಕಂದಾಯ ಸಚಿವ ಆರ್.ಅಶೋಕ್, ಕೆಲವು ಕೋಮುವಾದಿಗಳ ಕುಮ್ಮಕ್ಕಿನಿಂದ ಅಧಿಕಾರಿಗಳು ಮಸೀದಿಯ ಜಾಗವನ್ನು ಅಸಾಂವಿಧಾನಿಕವಾಗಿ ವಶಪಡಿಸಿಕೊಂಡಿದ್ದಾರೆ. ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದ ಉಡುಪಿಯಲ್ಲಿ ಕೋಮು ಸೌಹಾರ್ದತೆಗೆ ಅಡ್ಡಿಯಾಗುತ್ತಿರುವ ಭಾವನಾತ್ಮಕ ವಿಷಯವನ್ನು ಕದಡಲಾಗಿದೆ ಎಂದು ಅವರು ದೂರಿದ್ದಾರೆ.
ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಬಗ್ಗದೆ ಕಾನೂನು ಪ್ರಕಾರ ಜಾಗವನ್ನು ಮರಳಿ ಮಸೀದಿಯ ಹೆಸರಿಗೆ ವಾಪಸ್ ನೋಂದಾಯಿಸಬೇಕೆಂದು ಅಕ್ರಮ್ ಹಸನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.