ಶಾಸಕರು, ಬಿಜೆಪಿ ಮುಖಂಡರಿಂದ ಕಟ್ಟಡ ಕಾರ್ಮಿಕರ ಕಿಟ್‍ ದುರುಪಯೋಗ ಆರೋಪ: ನೂರಾರು ಕಾರ್ಮಿಕರಿಂದ ಪ್ರತಿಭಟನೆ

Update: 2021-06-28 15:08 GMT

ಚಿಕ್ಕಮಗಳೂರು, ಜೂ.28: ಬಿಜೆಪಿ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ಮುಖಂಡರಿಗೆ ಜನಪರ ಕಾಳಜಿ ಎಂಬುದೇ ಇಲ್ಲ. ಬಡವರು, ಕಾರ್ಮಿಕರು, ರೈತರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಲೂಟಿ ಮಾಡುವುದೇ ಇವರ ಕಾಳಜಿಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ ಪೂರೈಕೆ ಮಾಡಲಾದ ಪಡಿತರ ಕಿಟ್‍ಗಳನ್ನು ನೋಂದಾಯಿತ ಕಾರ್ಮಿಕರಲ್ಲದವರಿಗೆ ವಿತರಿಸುವ ಸಲುವಾಗಿ ನಗರದ ವಿವಿಧ ವಾರ್ಡ್ ಗಳಲ್ಲಿ ಅಕ್ರಮವಾಗಿ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಷ್ಟ್ ಪಕ್ಷ ಹಾಗೂ ಎಐಟಿಯುಸಿ ನೇತೃತ್ವದಲ್ಲಿ ಸೋಮವಾರ ನಗರದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಮಿಕ ಇಲಾಖೆ ಮೂಲಕ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇಲಾಖೆ ಪಡಿತರ ಕಿಟ್‍ಗಳನ್ನು ಪೂರೈಕೆ ಮಾಡಿದೆ. ಆದರೆ ಇಲಾಖೆ ಅಧಿಕಾರಿಗಳು ಈ ಕಿಟ್‍ಗಳನ್ನು ಫಲಾನುಭವಿಗಳಿಗೆ ಇನ್ನೂ ಹಂಚಿಕೆ ಮಾಡಿಲ್ಲ. ಅಧಿಕಾರಿಗಳ ಮೇಲೆ ಕ್ಷೇತ್ರದ ಶಾಸಕರಾಗಿರುವ ಸಿ.ಟಿ.ರವಿ ಹಾಗೂ ಅವರ ಬೆಂಬಲಿಗರು ಒತ್ತಡ ಹೇರಿ ಇಲಾಖೆಯಿಂದ ಪೂರೈಕೆ ಮಾಡಲಾದ ಕಿಟ್‍ಗಳನ್ನು ನಗರದ ವಿವಿಧ ವಾರ್ಡ್ ಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ. ಕಾರ್ಮಿಕ ಇಲಾಖೆಯ ಕಿಟ್‍ಗಳನ್ನು ಶಾಸಕರ ಸಿ.ಟಿ.ರವಿ ಅವರಿಂದ ವಿತರಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಬಿಜೆಪಿಯವರು ಇಂತಹ ನೀಚ ಕೆಲಸಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದರು.

ಕ್ಷೇತ್ರದ ಶಾಸಕರ ಹಾಗೂ ಅವರ ಹಿಂಬಾಲಕರು ನಗರದಲ್ಲಿನ ವಿವಿಧ ರಸ್ತೆಗಳು, ಒಳಚರಂಡಿ, ಅಮೃತ್‍ಯೋಜನೆ, ಕೆರೆ ಸೇರಿದಂತೆ ವಿವಿಧ ಕಾಮಗಾರಿಗಳ ಅನುದಾನವನ್ನು ಲೂಟಿ ಮಾಡಿಯಾಗಿದೆ. ಈಗ ಕಾರ್ಮಿಕರ ಹಣದಲ್ಲಿ ಕಾರ್ಮಿಕರಿಗೆ ನೀಡಲಾದ ಪಡಿತರ ಕಿಟ್‍ಗಳನ್ನೂ ಲೂಟಿ ಮಾಡಿ ಈ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಕೂಲಿ ಕಾರ್ಮಿಕರನ್ನು ಈ ಮೂಲಕ ಬಿಜೆಪಿಯವರು ವಂಚಿಸುತ್ತಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಾಗಿ ಆ ಪಕ್ಷದ ಶಾಸಕರು, ಮುಖಂಡರು ಲೂಟಿ ಮಾಡುವ ಯೋಜನೆಗಳನ್ನೇ ಜಾರಿ ಮಾಡುತ್ತಿದೆ. ಸಮಗ್ರ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡದ ಸರಕಾರ ಪಡಿತರ ಕಿಟ್, ಮಾಸ್ಕ್, ಸ್ಯಾನಿಟೈಸರ್ ಕಿಟ್‍ ಗಳ ಮೂಲಕ ಸರಕಾರದ ಹಣವನ್ನು ಲೂಟಿ ಮಾಡುವ ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿರುವ ಸಾವಿರಾರು ಕೃಷಿ, ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಅರೆ ಹೊಟ್ಟೆಯಲ್ಲಿ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಲಾಖೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಂಚಿತ್ ನೆರವು ನೀಡಲು ಮುಂದಾಗಿದ್ದು, ಆಹಾರ ಧಾನ್ಯಗಳ ಕಿಟ್‍ಗಳನ್ನು ಪೂರೈಕೆ ಮಾಡಿದೆ. ಆದರೆ ಶಾಸಕರು ಹಾಗೂ ಬಿಜೆಪಿಯವರ ಗುಲಾಮರಂತೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಕಿಟ್‍ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡದೇ ಬಿಜೆಪಿಯವರಿಗೆ ಲೂಟಿ ಮಾಡಲು ನೆರವು ನೀಡುತ್ತಿದ್ದಾರೆ. ಕಾರ್ಮಿಕರ ಕಿಟ್‍ಗಳು ಬಿಜೆಪಿಯವರ ಪಾಲಾಗುತ್ತಿವೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಿಟ್‍ಗಳನ್ನು ಮಾರಿಕೊಳ್ಳಲಾಗುತ್ತಿದೆ. ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರಿಗೆ ನೀಡಿದ ಕಿಟ್‍ಗಳಿಗೂ ಬಿಜೆಪಿಯವರಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಕಿಟ್‍ಗಳನ್ನು ಅಧಿಕಾರಿಗಳು ಕಾರ್ಮಿಕರಿಗೆ ವಿತರಿಸದಿರುವುದರ ಹುನ್ನಾರ ಏನು? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಎಂದರೆ ಲೂಟಿಕೋರರ ಪಕ್ಷ. ಮುಂದಿನ ಚುನಾವಣೆಗಳಲ್ಲಿ ಕಾರ್ಮಿಕರು ಇವರಿಗೆ ತಕ್ಕ ಪಾಠ ಕಲಿಸದಿದ್ದಲ್ಲಿ ಇಂತಹ ವಂಚನೆ ನಿರಂತರವಾಗಿರುತ್ತದೆ. ಅಧಿಕಾರಿಗಳೂ ಕೂಡಲೇ ಕಿಟ್‍ಗಳ ವಿತರಣೆಗೆ ಮುಂದಾಗದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದರು.

ಎಐಟಿಯಿಸಿ ಜಿಲ್ಲಾಧ್ಯಕ್ಷ ವಿಜಯ್‍ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 38 ಸಾವಿರ ನೋಂದಾಯಿತಿ ಕಟ್ಟಡ ಕಾರ್ಮಿಕರಿದ್ದಾರೆ. ಈ ಪೈಕಿ ಕಟ್ಟಡ ಕಾರ್ಮಿಕರ ಹಣದಲ್ಲೇ ಕಾರ್ಮಿಕ ಇಲಾಖೆ ರಾಜ್ಯಾದ್ಯಂತ ಕಿಟ್‍ಗಳನ್ನು ಪೂರೈಕೆ ಮಾಡಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ತಲಾ 10 ಸಾವಿರ ಕಿಟ್‍ಗಳನ್ನು ಸರಕಾರ ಪೂರೈಕೆ ಮಾಡಿದೆ. ಕಿಟ್‍ಗಳ ವಿತರಣೆ ಬಗ್ಗೆ ಇಲಾಖಾಧಿಕಾರಿಗಳು ಎಲ್ಲ ನೋಂದಾಯಿತ ಕಾರ್ಮಿಕರಿಗೂ ಮಾಹಿತಿ ನೀಡಿದ್ದಾರೆ. ಆದರೆ ಕಡೇ ಗಳಿಗೆಯಲ್ಲಿ ಕಿಟ್‍ಗಳ ವಿತರಣೆಗೆ ವಿಳಂಬ ಮಾಡಲಾಗುತ್ತಿದೆ. ಬಿಜೆಪಿಯವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಶಾಸಕರ ಮೂಲಕ ಕಿಟ್ ವಿತರಿಸಿ ಪುಕ್ಕಟ್ಟೆ ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಬಿಜೆಪಿಯವರಿಗೂ ಈ ಕಿಟ್‍ಗಳಿಗೂ ಸಂಬಂಧವಿಲ್ಲ. ಇಲಾಖಾಧಿಕಾರಿಗಳೇ ಕಿಟ್‍ಗಳನ್ನು ವಿತರಣೆ ಮಾಡಬೇಕು. ಬಿಜೆಪಿಯವರು ಕಾರ್ಮಿಕರಿಗೆ ಬಂದ ಕಿಟ್‍ಗಳನ್ನು ತಮಗೆ ಬೇಕಾದವರಿಗೆ ವಿತರಿಸಲು ಮುಂದಾಗಿದ್ದಾರೆಂದು ಆರೋಪಿಸಿದರು.

ಧರಣಿ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು 'ಕಿಟ್‍ಗಳ ವಿತರಣೆಗೆ ಕ್ರಮ ವಹಿಸಲಾಗುವುದು, ಧರಣಿ ಕೈಬಿಡುವಂತೆ ಮನವಿ ಮಾಡಿದರು. ಈ ವೇಳೆ ಕಿಟ್‍ಗಳನ್ನು ವಿತರಿಸದ ಹೊರತು ಧರಣಿ ಕೈಬಿಡಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದರು. ಆಗ ಕಾರ್ಮಿಕ ಇಲಾಖೆ ಅಧಿಕಾರಿಗಳು 200 ಪಡಿತರಗಳ ಕಿಟ್‍ಅನ್ನು ಸ್ಥಳದಲ್ಲೇ ವಿತರಣೆ ಮಾಡಲು ಕ್ರಮವಹಿಸಿ, ಉಳಿದ ಕಿಟ್‍ಗಳ ವಿತರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಮುಖಂಡರು ಧರಣಿ ಹಿಂಪಡೆದರು. 

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಘು, ತಾಲೂಕು ಅಧ್ಯಕ್ಷ ಜಯಕುಮಾರ್, ಕಾರ್ಯದರ್ಶಿ, ವಸಂತ್‍ಕುಮಾರ್, ಜೆಡಿಎಸ್ ಪಕ್ಷದ ಜಯಂತಿ, ಮುಖಂಡರಾದ ಮಂಜೆಗೌಡ, ಶಾಂತಕುಮಾರ್ ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News