ಅಧಿಕ ಪೌಷ್ಠಿಕಾಂಶವುಳ್ಳ ‘ಸಿದ್ದು ಹಲಸು’ ಮನೆಯಂಗಳ ಮತ್ತು ವಾಣಿಜ್ಯ ಕೃಷಿಗೆ ಸೂಕ್ತ: ಸಿಎಂ ಯಡಿಯೂರಪ್ಪ
ಬೆಂಗಳೂರು, ಜೂ.28: ಅಧಿಕ ಪೌಷ್ಠಿಕಾಂಶವುಳ್ಳ ‘ಸಿದ್ದು ಹಲಸು’ ಮನೆಯಂಗಳ ಮತ್ತು ವಾಣಿಜ್ಯ ಕೃಷಿಗೆ ಸೂಕ್ತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಸಹಭಾಗಿ ಸಸ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿ ಸಿದ್ದು ಹಲಸು ತಳಿಯ ಸಸ್ಯಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಹೊಸದಿಲ್ಲಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹಲಸಿನ ತಳಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ತುಮಕೂರು ಜಿಲ್ಲೆಯ ಚೇಳೂರು ಗ್ರಾಮ ಎಸ್.ಎಸ್.ಪರಮೇಶ್ ಎಂಬವರ ತೋಟದಲ್ಲಿ ಈ ತಳಿಯನ್ನು ಗುರುತಿಸಲಾಗಿರುವುದು ಶ್ಲಾಘನೀಯ ಎಂದರು.
ಉಳಿದ ಹಲಸಿನ ತಳಿಗಳಿಗೆ ಹೋಲಿಸಿದರೆ ತಾಮ್ರ ಕೆಂಪು ಬಣ್ಣದ ಸಿದ್ದು ಹಲಸು ಅಧಿಕ ಪೌಷ್ಠಿಕಾಂಶಗಳ ಜೊತೆಗೆ ಔಷಧೀಯ ಗುಣಗಳನ್ನು ಹೊಂದಿದೆ. ದೇಶದಲ್ಲಿ ಲಭ್ಯವಿರುವ ಎಲ್ಲ ಹಲಸು ತಳಿಗಳ ಪೈಕಿ ಸಿದ್ದು ಹಲಸು ಶ್ರೇಷ್ಠ ಮತ್ತು ವಿಶಿಷ್ಟ ಎಂಬ ಮಾನ್ಯತೆ ಪಡೆದಿದೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್.ಎಸ್.ಪರಮೇಶ್ ಕಳೆದ 2 ವರ್ಷಗಳಲ್ಲಿ 22 ಲಕ್ಷ ಆದಾಯವನ್ನು ಗಳಿಸಿದ್ದು, ಜೀವ ವೈವಿಧ್ಯತೆಯನ್ನು ಕಾಪಾಡುವುದರೊಂದಿಗೆ ರೈತರು ತಮ್ಮ ಆದಾಯವನ್ನೂ ದ್ವಿಗುಣಗೊಳಿಸಿಕೊಳ್ಳಬಹುದಾಗಿದೆ ಎಂದು ನಿರೂಪಿಸಿದ್ದಾರೆ ಎಂದು ಯಡಿಯೂರಪ್ಪ ಶ್ಲಾಘಿಸಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಈವರೆಗೆ ಒಂದು ಲಕ್ಷ ಸಸಿಗಳನ್ನು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ 31 ಸಾವಿರ ಕೃಷಿಕರಿಗೆ ವಿತರಿಸಲಾಗಿದೆ. ರಾಜ್ಯ ರೈತರು ಈ ವಿಶಿಷ್ಟ ಪ್ರಬೇಧದ ಹಲಸನ್ನು ಬೆಳೆಸುವ ಮೂಲಕ ಈ ತಳಿಯನ್ನು ಸಂರಕ್ಷಿಸುವುದಲ್ಲದೆ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳಬಹುದು ಎಂದ ಮುಖ್ಯಮಂತ್ರಿ, ಶಿಕಾರಿಪುರದ ತಮ್ಮ ತೋಟದಲ್ಲಿ ಸಿದ್ದು ಹಲಸು ಸಸಿಗಳನ್ನು ಬೆಳೆಸಲು ಆಸಕ್ತಿ ತೋರಿದರು.
ಈ ಸಂದರ್ಭದಲ್ಲಿ ತುಮಕೂರು ಸಂಸದ ಜಿ.ಎಸ್.ಬಸವರಾಜು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್.ಎಸ್.ಮೂರ್ತಿ, ತುಮಕೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಿ.ಎಚ್.ಇ.ಎಸ್. ಮುಖ್ಯಸ್ಥ ಜಿ.ಕರುಣಾಕರನ್ ಹಾಗೂ ಸಿದ್ದು ಹಲಸು ಬೆಳೆದ ರೈತ ಎಸ್.ಎಸ್.ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.