×
Ad

ರಾಜ್ಯದಲ್ಲಿ 3.30 ಲಕ್ಷ ಕೋವಿಡ್ ಸಾವುಗಳಾಗಿವೆ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ: ಡಿ.ಕೆ.ಶಿವಕುಮಾರ್

Update: 2021-07-02 18:54 IST

ಬೆಂಗಳೂರು, ಜು. 2: `ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಕೋವಿಡ್ ಸಾವು ಎಂದು ಮರಣ ಪ್ರಮಾಣ ಪತ್ರವನ್ನು ರಾಜ್ಯ ಸರಕಾರ ನೀಡುತ್ತಿಲ್ಲ. ಆದರೆ, ಅವರೆಲ್ಲರೂ ಆಕ್ಸಿಜನ್ ದುರಂತದಿಂದಲೇ ಸಾವನ್ನಪ್ಪಿದ್ದಾರೆಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ 3.30 ಲಕ್ಷ ಕೋವಿಡ್ ಸಾವುಗಳು ಆಗಿವೆ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ನಾನು ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಅದರಲ್ಲೂ ಚಾಮರಾಜನಗರದಲ್ಲೇ ಒಂದೇ ದಿನ 65 ಮಂದಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ 36 ಮಂದಿ ಸತ್ತಿದ್ದಾರೆಂದು ವರದಿ ಬಂದಿವೆ. ಸರಕಾರ ಕೇವಲ 3 ಜನ ಸತ್ತಿದ್ದಾರೆ ಎಂದಿತ್ತು. ನಾನು 36 ಮೃತರ ಕುಟುಂಬಗಳ ಮನೆಗಳಿಗೆ ಭೇಟಿ ಕೊಟ್ಟಿದ್ದೆ. ಇವರಲ್ಲಿ ಯಾರಿಗೂ ಸರಕಾರ ಕೋವಿಡ್ ಸಾವು ಎಂದು ಮರಣ ಪ್ರಮಾಣ ಪತ್ರ ಕೊಟ್ಟಿಲ್ಲ. ಈ ಮಧ್ಯೆ ಸರಕಾರ 1 ಲಕ್ಷ ರೂ.ಪರಿಹಾರ ನೀಡುವುದಾಗಿ ತಿಳಿಸಿದೆ. ಸುಪ್ರೀಂ ಕೋರ್ಟ್ ಪರಿಹಾರ ನೀಡಲು ಕಾಲಾವಕಾಶ ನಿಗದಿ ಮಾಡಿದೆ' ಎಂದು ಹೇಳಿದರು.

'ಆಂಧ್ರಪ್ರದೇಶ ಸರಕಾರ ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರ ಘೋಷಿಸಿದೆ. ರಾಜ್ಯದಲ್ಲೂ ಮೃತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಸೋಂಕಿನಿಂದ ಸತ್ತವರ ಮಾಹಿತಿ ಪಡೆಯಲು ಸರಕಾರ ಡೆತ್ ಆಡಿಟ್ ಮಾಡಿ ಅವರಿಗೆ ಪರಿಹಾರ ನೀಡಬೇಕು. ನಿನ್ನೆ ನಮ್ಮ ಕಾರ್ಯಾಧ್ಯಕ್ಷರು ಬೀದರ್ ಒಂದೇ ಜಿಲ್ಲೆಯಲ್ಲಿ ಸರಕಾರ ಹೇಗೆ ಸುಳ್ಳು ಸಾವಿನ ಲೆಕ್ಕ ನೀಡುತ್ತಿದೆ ಎಂಬುದನ್ನು ಹೇಳಿದ್ದಾರೆ. ಇದಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಪ್ರತಿ ಮನೆಗೂ ಹೋಗಿ ಅವರ ಮಾಹಿತಿ ಪಡೆದು, ಅವರಿಗೆ ಪರಿಹಾರ ಸಿಗುವಂತೆ ಮಾಡಬೇಕೆಂದು ಸೂಚನೆ ಕೊಟ್ಟಿದ್ದೇವೆ. ನಾವು ಈ ಸಂಕಷ್ಟದ ಸಮಯದಲ್ಲಿ ಜನರ ಬೆನ್ನಿಗೆ ನಿಲ್ಲುತ್ತೇವೆ' ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಅಪ್ಪ-ಅಮ್ಮ ಇಲ್ಲದ ಮನೆಯಾಗಿದೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, `ಅಯ್ಯೋ ಪಾಪ, ವಿಧಾನಸಭೆ ಚುನಾವಣೆ ಬರಲಿ, ಇವರಿಗೆ ಜನರೇ ಉತ್ತರ ಕೊಡುತ್ತಾರೆ' ಎಂದು ತಿರುಗೇಟು ನೀಡಿದರು. ಇನ್ನು ಕುಮಾರಸ್ವಾಮಿ ಅವರು 17 ಮಂದಿ ಪಕ್ಷ ತೊರೆದವರ ವಿಚಾರವಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಹೇಳಿಕೆ ನೋಡಿದೆ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಅವರ ಜೀವ ಉಳಿಸುವುದು ಎಂದರೆ ಯಾವ ರೀತಿ ಎಂದು ಗೊತ್ತಾಗುತ್ತಿಲ್ಲ' ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಹೆಸರಲ್ಲಿ ಸಚಿವ ಶ್ರೀರಾಮುಲು ಅವರ ಆಪ್ತ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ತ ಸಹಾಯಕರ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಸಚಿವರ ಆಪ್ತರ ಅವ್ಯವಹಾರ ಕುರಿತು ನಾನು ಮಾತನಾಡುವುದು ಸರಿಯಲ್ಲ. ಹೀಗಾಗಿ ಯಾವುದೇ ಪ್ರತಿಕ್ರಿಯೆ ನೀಡಲಾರೆ

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News