ಕರ್ನಾಟಕ ರಾಜ್ಯ ಮುಕ್ತ ವಿವಿ ಯುಜಿಸಿ ನಿಯಮ ಗಾಳಿಗೆ ತೂರಿ ಪದವಿ ನೀಡಲು ಮುಂದಾಗಿದೆ: ಕೆ.ಎಸ್. ಶಿವರಾಮ್ ಆರೋಪ

Update: 2021-07-02 17:53 GMT

ಮೈಸೂರು,ಜು.2: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ 77ಸಾವಿರ ವಿದ್ಯಾರ್ಥಿಗಳಿಗೆ ಪದವಿ ನೀಡಲು ಮುಂದಾಗಿದೆ. ಇರಿಂದ ಮತ್ತೊಮ್ಮೆ ಮುಕ್ತ ವಿವಿಯ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ  ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಗಂಭೀರ ಆರೋಪ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯುಜಿಸಿ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿದೆ.  ಈ ಹಿಂದೆ ಕೂಡ ಯುಜಿಸಿ ನಿಯಮಗಳನ್ನು ಉಲ್ಲಂಘಿದ ಕಾರಣಕ್ಕೆ ಮುಕ್ತ ವಿವಿ ಮಾನ್ಯತೆ ರದ್ದಾಗಿತ್ತು. ಇದಾದ ಬಳಿಕ ಯುಜಿಸಿಯ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಆದೇಶಿಸಿ ಮಾನ್ಯತೆ ನೀಡಲಾಗಿದೆ ಎಂದರು.

ಈಗಲೂ ಮುಕ್ತ ವಿ.ವಿ ಯುಜಿಸಿ ವಿಧಿಸಿದ್ದ ಷರತ್ತುಗಳನ್ನು ಗಾಳಿಗೆ ತೂರಿದೆ. ನಿಯಮಗಳಿಗೆ ವಿರುದ್ಧವಾಗಿ ಕೋರ್ಸ್‍ಗಳನ್ನು ನಡೆಸಲಾಗುತ್ತಿದೆ. ಮುಕ್ತ ವಿವಿಯಲ್ಲಿ ನಿಯಮ ಬಾಹಿರವಾಗಿ ಪದವಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಆಗಿದೆ ಎಂದು ಹೇಳಿದರು.

ಕಳೆದ 2012-13 ನೇ ಸಾಲಿನ ಸುಮಾರು 77 ಸಾವಿರ ವಿದ್ಯಾರ್ಥಿಗಳಿಗೆ ತರಾತುರಿಯಲ್ಲಿ ಪದವಿ ಪ್ರಮಾಣ ಪತ್ರಗಳನ್ನು ಹಂಚುವ ಕೆಲಸಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಮುಕ್ತ ವಿವಿಯಲ್ಲಿ ಮತ್ತೊಮ್ಮೆ ರಾಷ್ಟ್ರಮಯ ಶೈಕ್ಷಣಿಕ ಮತ್ತು ಆರ್ಥಿಕ ಹಗರಣಗಳು ಮರುಕಳಿಸುವುದನ್ನು ತಡೆಯಲು ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು. ನಿಯಮ ಬಾಹಿರವಾಗಿ ಪದವಿ ಪ್ರಮಾಣಪತ್ರ ವಿತರಿಸುವುದಕ್ಕೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಭೂ ಮಾಫಿಯಾ ಕೈ ಹಾಕಿದ್ದಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ಮೇಲೆ ಷಡ್ಯಂತ್ರ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ ಎಂದು ಕೆ.ಎಸ್.ಶಿವರಾಮ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News