×
Ad

ದಲಿತ ಸಮುದಾಯದವರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿಲ್ಲ ಎಂಬ ಕೊರಗು ಇದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್

Update: 2021-07-03 21:51 IST

ಮೈಸೂರು,ಜು.3:  ದಲಿತ ಸಮುದಾಯದವರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿಲ್ಲ ಎಂಬ ಕೊರಗು ನಮಗೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರದಲ್ಲಿ ಅರ್ಹತೆ,ಹಿರಿತನ ಎಲ್ಲಾ ಮುಖ್ಯ. ನನಗೆ ತಿಳಿದಂತೆ ನಮ್ಮ ಸಮುದಾಯದಲ್ಲಿ ಮಲ್ಲಿಕಾರ್ಜುನ ಖರ್ಗೆ ದೊಡ್ಡಮಟ್ಟದಲ್ಲಿದ್ದಾರೆ. ಒಬ್ಬ ಹಿರಿಯ ಮುತ್ಸದ್ದಿ ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟ್ ಬೀಸಿದರು.

ಹಿರಿತನದಲ್ಲಿ ನಾವೆಲ್ಲಾ ಬಹಳ ಜೂನಿಯರ್ ಇದ್ದೀವಿ, ನಾವೆಲ್ಲ ಮುಖ್ಯಮಂತ್ರಿ ಹುದ್ದೆ ಮೇಲೆ ಆಸೆ ಪಟ್ಟವರಲ್ಲ, ನನಗೆ ಪಕ್ಷದಲ್ಲಿ ಕಾರ್ಯಾಧ್ಯಕ್ಷದಂತಹ ದೊಡ್ಡ ಹುದ್ದೆ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದರು.

ಸದ್ಯ ದಲಿತ ಮುಖ್ಯಮಂತ್ರಿ ಕೂಗು ಅಪ್ರಸ್ತುತ. ಕಾಂಗ್ರೆಸ್ ಪಕ್ಷ ದಲಿತರಿಗೆ ಕೊಟ್ಟಷ್ಟು ಯಾವ ಪಕ್ಷವೂ ಕೊಟ್ಟಿಲ್ಲ. ಕೇಂದ್ರದಲ್ಲಿ ಸಂಪುಟ ಪುನರ್‍ರಚನೆ ಆಗುತ್ತಿದೆ. ಐದು ಮಂದಿ ದಲಿತ ಸಂಸದರಿದ್ದಾರೆ. ಬಿಜೆಪಿ ಅವರು ಯಾಕೆ ಅವರನ್ನು ಸಚಿವರನ್ನಾಗಿ ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಪರಾಜಿತರಾದರೂ ರಾಜ್ಯಸಭೆ ಶಾಸಕಾಂಗ ನಾಯಕರನ್ನಾಗಿ ಮಾಡಲಾಗಿದೆ. ಮುನಿಯಪ್ಪಗೆ ಸಚಿವ ಸ್ಥಾನ ಕೊಟ್ಟಿತ್ತು. ಪರಮೇಶ್ವರ್ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದರು. ಹಿಂದೆ ಮುಖ್ಯಮಂತ್ರಿ ಆಗುವ ಅವಕಾಶ ದಲಿತರಿಗೆ ಇತ್ತು. 2008ರಲ್ಲಿ ಬಹುಮತ ಬಂದಿದ್ದರೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಿರುತ್ತಿದ್ದರು. 2013ರಲ್ಲಿ ಪರಮೇಶ್ವರ್ ಗೆದ್ದಿದ್ದರೆ ಪರಮೇಶ್ವರ್, ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಹಂಚಿಕೆ ಆಗುತ್ತಿತ್ತು. ಕಾಂಗ್ರೆಸ್ ಪಕ್ಷ ಯಾವತ್ತು ದಲಿತರಿಗೆ ಅನ್ಯಾಯ ಮಾಡಿಲ್ಲ ಎಂದು ಆರ್.ಧ್ರುವನಾರಾಯಣ್ ಹೇಳಿದರು.

ದಲಿತರಲ್ಲಿ ನಮ್ಮವರೊಬ್ಬರು ಮುಖ್ಯಮಂತ್ರಿ ಆಗಲಿಲ್ಲ ಎಂಬ ಕೊರಗು ಇದ್ದೇ ಇದೆ. ಅದಂತೂ ನಿಜ, ಸಮಯ ಸಂದರ್ಭ ಬಂದಾಗ ಅವಕಾಶ ಸಿಗುತ್ತದೆ. ಸಾಮಾಜಿಕ ನ್ಯಾಯ ಕೊಟ್ಟಿರೋದೆ ಕಾಂಗ್ರೆಸ್ ಪಕ್ಷ, ಎಲ್ಲಾ ಸಮಾಜದವರಿಗೂ ಅವಕಾಶ ಸಿಕ್ಕಿದೆ ಎಂದರು.

ನಾನು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ತೀರ್ಮಾನಿಸಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ ಕೇವಲ 1800 ಮತಗಳ ಅಂತರದಿಂದ ಸೋತಿದ್ದೇನೆ. ಮುಂದಿನ ಗುರಿ  ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಅಷ್ಟೇ. ಅಭ್ಯರ್ಥಿಯೂ ನಾನೆ ಅಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ಸಿಕ್ಕಾಗಲೇ ಅಧಿಕೃತ ಎಂದು ಗೊತ್ತಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News