×
Ad

ಭ್ರಷ್ಟಾಚಾರ-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ದಿನೇಶ್ ಗುಂಡೂರಾವ್ ಟೀಕೆ

Update: 2021-07-04 17:14 IST

ಬೆಂಗಳೂರು, ಜು. 4: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೆಳ್ಳಂದೂರು ಡಿ-ನೋಟಿಫೈ ಸೇರಿದಂತೆ ಈ ರೀತಿಯ ಅನೇಕ ಕಂಟಕಗಳು ಎದುರಿಸುತ್ತಿದ್ದಾರೆ. ಆದರೆ ಎಲ್ಲಿಯವರೆಗೆ ಕೇಂದ್ರಕ್ಕೆ ಕಾಣಿಕೆ ಮುಟ್ಟುತಿರುತ್ತದೋ ಅಲ್ಲಿಯವರೆಗೆ ಬಿಜೆಪಿ ಹೈಕಮಾಂಡ್ ಏನೂ ಮಾಡುವುದಿಲ್ಲ. ಭ್ರಷ್ಟಾಚಾರ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು' ಎಂದು ಮಾಜಿ ಸಚಿವ ಹಾಗೂ ಗಾಂಧಿ ನಗರದ ಕ್ಷೇತ್ರದ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಐಟಿ ಕಾರಿಡಾರ್ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಡಿನೋಟಿಫಿಕೆಷನ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಂಟಕ ಎದುರಾಗಿದೆ ಎಂಬ ಸುದ್ದಿಯನ್ನು ಉಲ್ಲೇಖಿಸಿದ್ದು, ಬಿಜೆಪಿ ಹೈಕಮಾಂಡ್ ಭ್ರಷ್ಟರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಡಿಫೆನ್ಸ್ ಗೆ ನೀಡಿದ್ದೇಕೆ?: `59 ಸಾವಿರ ಕೋಟಿ ರೂ.ರಫೇಲ್ ಅವ್ಯವಹಾರದಲ್ಲಿ ಕೇಂದ್ರ ಸರಕಾರವೇ ನೇರವಾಗಿ ಭಾಗಿಯಾಗಿದೆ. ರಫೇಲ್‍ನಲ್ಲಿ ಅಕ್ರಮ ನಡೆದಿಲ್ಲವಾದರೆ 126 ರಫೇಲ್ ವಿಮಾನಗಳ ಬದಲು ಕೇವಲ 36 ವಿಮಾನ ಖರೀದಿಗೆ ಪ್ರಧಾನಿ ಅನುಮೋದನೆ ಕೊಟ್ಟಿದ್ಯಾಕೆ? ಎಚ್‍ಎಎಲ್ ಜೊತೆ ನಡೆದಿದ್ದ ಖರೀದಿ ಒಪ್ಪಂದ ದಿಢೀರ್ ರದ್ದಾಗಿ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಗೆ ನೀಡಿದ್ಯಾಕೆ?' ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

`ರಫೇಲ್ ಡೀಲ್‍ನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಅನುಮಾನಕ್ಕೆ ಈಗ ಪುಷ್ಟಿ ಸಿಕ್ಕಿದೆ. 59 ಸಾವಿರ ಕೋಟಿ ರೂ. ವ್ಯವಹಾರದ ರಫೇಲ್ ಹಗರಣದಲ್ಲಿ ಸ್ವತಃ ಪ್ರಧಾನಿ ಕಾರ್ಯಾಲಯವೇ ಭಾಗಿಯಾಗಿರುವುದು ಸತ್ಯ. `ನಾ ಕಾವೂಂಗಾ, ನಾ ಕಾನೇ ದೂಂಗಾ' ಎಂದು ಹೇಳಿಕೊಳ್ಳುವ ಮೋದಿಯವರು, ರಫೇಲ್ ಡೀಲ್‍ನಲ್ಲಿ ಯಾರು ಎಷ್ಟು ಸಾವಿರ ಕೋಟಿ ರೂ.ತಿಂದರು ಎಂದು ತಿಳಿಸಲಿ' ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ರಫೇಲ್ ಡೀಲ್‍ನಲ್ಲಿ ಕೇಂದ್ರ ಸರಕಾರದ ಪ್ರಾಯೋಜಿತ ಭ್ರಷ್ಟಾಚಾರ. ಈ ಡೀಲ್‍ನಲ್ಲಿ ವ್ಯಾಪಕ ಭ್ರಷ್ಟಾಚಾರದ ಅನುಮಾನದಿಂದಲೇ ಫ್ರಾನ್ಸ್, ಈ ಹಗರಣದ ತನಿಖೆಗೆ ಆದೇಶಿಸಿದೆ. ಫ್ರಾನ್ಸ್ನಂತೆ ನಮ್ಮ ದೇಶದಲ್ಲೂ ಈ ಹಗರಣದ ತನಿಖೆ ಆಗಲಿ.

ಮೋದಿಯವರು ಹಗರಣದ ತನಿಖೆಯನ್ನು ಜೆಪಿಸಿಗೆ ವಹಿಸಲಿ. ಆಗ ಡೀಲ್‍ನಲ್ಲಿ ಪ್ರಾಮಾಣಿಕತೆಯ ಮುಖವಾಡ ಹಾಕಿಕೊಂಡಿರುವ ಅಸಲಿ ಮುಖ ಬಯಲಾಗಲಿದೆ' ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News