ಶಿವಸೇನೆ-ಬಿಜೆಪಿ ಸಂಬಂಧವನ್ನುಅಮೀರ್ ಖಾನ್-ಕಿರಣ್ ರಾವ್ಗೆ ಹೋಲಿಸಿದ ಸಂಜಯ್ ರಾವತ್
ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಅವರು ಶಿವಸೇನೆ ಹಾಗೂ ಬಿಜೆಪಿ 'ಶತ್ರುಗಳಲ್ಲ' ಎಂದು ಹೇಳಿದ ಒಂದು ದಿನದ ನಂತರ ಸಂಸದ ಸಂಜಯ್ ರಾವತ್ ಅವರು ಎರಡು ಪಕ್ಷಗಳ ನಡುವಿನ ಸಂಬಂಧವನ್ನು ನಟ ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ಸಂಬಂಧಕ್ಕೆ ಹೋಲಿಸಿದ್ದಾರೆ.
ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು ತಮ್ಮ 15 ವರ್ಷದ ವೈವಾಹಿಕ ಜೀವನ ಅಂತ್ಯವಾಗಿದೆ ಎಂದು ಜಂಟಿ ಹೇಳಿಕೆಯೊಂದರಲ್ಲಿಇತ್ತೀಚೆಗೆ ಘೋಷಿಸಿದರು.
"ನಾವು ಭಾರತ-ಪಾಕಿಸ್ತಾನವಲ್ಲ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರನ್ನು ನೋಡಿ. ನಮ್ಮ ಸಂಬಂಧವೂ ಹಾಗೆಯೇ ಇದೆ. ನಮ್ಮ (ಶಿವಸೇನೆ, ಬಿಜೆಪಿ) ರಾಜಕೀಯ ಮಾರ್ಗಗಳು ವಿಭಿನ್ನವಾಗಿವೆ. ಆದರೆ ಸ್ನೇಹ ಹಾಗೇ ಉಳಿಯುತ್ತದೆ" ಎಂದು ಶಿವಸೇನೆ ನಾಯಕ ಸಂಜಯ್ ಹೇಳಿದ್ದಾರೆ.
2019 ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ ಪಕ್ಷ ಬಿಜೆಪಿಯೊಂದಿಗಿನ ಮೈತ್ರಿಯಿಂದ ಹೊರ ನಡೆದು ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರಕಾರವನ್ನು ರಚಿಸಿತು.
"ಭಿನ್ನಾಭಿಪ್ರಾಯಗಳಿದ್ದರೂ ಬಿಜೆಪಿ ಮತ್ತು ಶಿವಸೇನೆ ಶತ್ರುಗಳಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಫಡ್ನವಿಸ್ ರವಿವಾರ ಹೇಳಿದ್ದರು. ಇಬ್ಬರು ಮಾಜಿ ಮೈತ್ರಿಪಕ್ಷಗಳು ಒಟ್ಟಿಗೆ ಸೇರುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗೆ ಫಡ್ನವಿಸ್ ಪ್ರತಿಕ್ರಿಯಿಸಿದರು.