ಕೆ.ಆರ್. ಎಸ್. ಡ್ಯಾಂ ಬಿರುಕು ಬಿಟ್ಟಿಲ್ಲ: ಇಂಜಿನಿಯರ್ ವಿಜಯಕುಮಾರ್ ಸ್ಪಷ್ಟನೆ
ಮಂಡ್ಯ, ಜು.6: ಕೆಆರ್ಎಸ್ ಜಲಾಶಯದ ಸುರಕ್ಷತೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿರುವ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ವಿಜಯ್ಕುಮಾರ್ ಜಲಾಶಯ ಕುರಿತು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕೆಆರ್ಎಸ್ ಜಲಾಶಯದಲ್ಲಿ ಯಾವುದೇ ರೀತಿಯ ಬಿರುಕು ಕಂಡುಬಂದಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ಸರಕಾರಕ್ಕೆ ಸಮಗ್ರ ವರದಿ ನೀಡಲಾಗಿದೆ. ನಿಗಮದ ತಂತ್ರಜ್ಞರು ಪ್ರತಿನಿತ್ಯ ಜಲಾಶಯದ ಸುರಕ್ಷತೆ ಪರಿಶೀಲನೆ ನಡೆಸುತ್ತಾರೆ. ಜಲಾಶಯ ಭದ್ರವಾಗಿದ್ದು, ಸಾರ್ವಜನಿರು ಯಾವುದೇ ಆತಂಕಪಡುವ ಅಗತ್ಯವಿಲ್ಲ' ಎಂದು ತಿಳಿಸಿದರು.
ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ವೇಳೆ ಸಂಸದೆ ಸುಮಲತಾ ಅವರಿಗೂ ಇದೇ ಮಾಹಿತಿ ನೀಡಲಾಗಿದೆ. ಬಿರುಕು ಬಿಟ್ಟಿದೆ ಎಂಬುದು ಕೇವಲ ಊಹಾಪೋಹ. ಜಲಾಶಯದಲ್ಲಿ ಕ್ರಸ್ಟ್ ಗೇಟ್ ಬದಲಾವಣೆ ಕಾಮಗಾರಿ ನಡೆಯುತ್ತಿದೆ. ಬದಲಿ ಗೇಟ್ ಅಳವಡಿಸುವಾಗ ಕಲ್ಲುಗಳನ್ನು ಹೊರಗೆ ತೆರೆಯಲಾಗಿದೆ. ಕೆಲ ಕಿಡಿಗೇಡಿಗಳು ಅದರ ವಿಡಿಯೋ ತೆಗೆದು ಜಲಾಶಯವೇ ಬಿರುಕುಬಿಟ್ಟಿದೆ ಎಂಬ ಸುಳ್ಳು ಸುದ್ದಿ ಹರಡಿಸಿದ್ದಾರೆ. ಇದನ್ನು ಯಾರೂ ನಂಬಬಾರದು ಎಂದು ಅವರು ಹೇಳಿದರು