ಸ್ಟ್ಯಾನ್ ಸ್ವಾಮಿ ಸಾವಿನ ಕುರಿತು ತನಿಖೆ ನಡೆಯಲಿ: ಡಾ.ಎಚ್.ಸಿ.ಮಹದೇವಪ್ಪ ಆಗ್ರಹ
Update: 2021-07-08 17:56 GMT
ಮೈಸೂರು,ಜು.8: ಮಾನವ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಸಾವು ಆಘಾತ ತಂದಿದೆ. ಇವರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ತನಿಖಾ ಸಂಸ್ಥೆ ಮೂಲಕ ತನಿಖೆ ನಡೆಸಿ ಸಾವಿನ ಸ್ಪಷ್ಟತೆಯನ್ನು ಬಹಿರಂಗ ಪಡಿಸಬೇಕು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಟ್ಯಾನ್ ಸ್ವಾಮಿ ಸಾಮಾನ್ಯ ವ್ಯಕ್ತಿಯಲ್ಲ, ಈ ದೇಶದ ಬಡವರು ನೊಂದವರು ಮತ್ತು ಬುಡಕಟ್ಟು ಜನರ ಪರ ಹೋರಾಟದ ಮಾಡಿದ ಅಪ್ರತಿಮ ಮಾನವ ಹಕ್ಕುಗಳ ಹೋರಾಟಗಾರ. ಇವರ ಸಾವಿಗೆ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು ನಂಬಿಕೆ ಅಪನಂಬಿಕೆಗಳು ಮೂಡಿವೆ. ಹಾಗಾಗಿ ಭಾರತ ಸರ್ಕಾರ ಇವರ ಸಾವಿನ ಕುರಿತು ಒಂದು ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ಬಹಿರಂಗ ಪಡಿಸಬೇಕು ಎಂದು ಹೇಳಿದರು.