ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲೂ ಕೂರುವುದಿಲ್ಲ ಇನ್ನು ಮುಖ್ಯಮಂತ್ರಿ ಹಗಲು ಕನಸು ಕಾಣುತ್ತಿದೆ: ಸಚಿವ ಈಶ್ವರಪ್ಪ
ಮೈಸೂರು,ಜು.9: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ಸ್ಥಾನದಲ್ಲೂ ಕೂರುವುದಿಲ್ಲ ಇನ್ನು ಮುಖ್ಯಮಂತ್ರಿ ಪದವಿಯ ಹಗಲು ಕನಸು ಕಾಣುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಎರಡು ವರ್ಷ ಸಮಯದ ಇದೆ. ಆದರೆ ಕಾಂಗ್ರೆಸ್ ಪಕ್ಷ ಈಗಲೇ ಮುಖ್ಯಮಂತ್ರಿ ಸ್ಥಾನದ ಹಗಲು ಕನಸು ಕಾಣುತ್ತಿದೆ. ಅವರಿಗೆ ವಿರೋದ ಪಕ್ಷದ ಸ್ಥಾನವೂ ದೊರಕುವುದಿಲ್ಲ, ಈಗಾಗಲೇ ಐದು ಜಾತಿಗೆ ಐದು ಮಂದಿ ಸ್ವಯಂ ಘೋಷಿತ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಪಕ್ಷಕ್ಕೆ ಬಂದಿರು 17 ಮಂದಿ ಶಾಸಕರನ್ನು ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಸಿದ್ದರಾಮಯ್ಯರದು ಒಂದು ಹೇಳಿಕೆಯಾದರೆ ಡಿ.ಕೆ.ಶಿವಕುಮಾರ್ ಅವರದು ಮತ್ತೊಂದು ಹೇಳಿಕೆ. ಈಗಾಗಲೇ ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ಈ ಪಕ್ಷಕ್ಕೆ ಯಾರು ಹೋಗುತ್ತಾರೆ. ಬಿಜೆಪಿಗೆ ಬಂದಿರುವ ಯಾರೂ ವಾಪಸ್ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿಲ್ಲ ಎಂದು ಆಣೆ ಮಾಡಲಿ, ಸಿದ್ದರಾಮಯ್ಯ ಅವರನ್ನು ಪರಮೇಶ್ವರ್ ಸೋಲಿಸಿಲ್ಲ ಎಂದು ಆಣೆ ಮಾಡಲಿ. ಇವರು ಈ ವಿಚಾರದ ಬಗ್ಗೆ ಸ್ಪಷ್ಟಪಸಿಸಿದರೆ ನಾನು ಈ ಇಬ್ಬರೂ ಹೇಳಿದಂತೆ ಕೇಳುತ್ತೇನೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಯಾವ ಪಕ್ಷಕ್ಕೆ ಹೋದರು ಸೊಸೆ. ಎಲ್ಲಿ ಅವರು ಮಗ ಆಗಲು ಸಾಧ್ಯ, ಕಾಂಗ್ರೆಸ್ ಪಕ್ಷಕ್ಕೂ ಸೊಸೆ, ಬಾದಾಮಿಗೂ ಸೊಸೆ ಎಂದು ಲೇವಡಿ ಮಾಡಿದರು. ಮುಖ್ಯಮಂತ್ರಿ ಬದಲಾವಣೆ ಸಂಬಂಧ ಮೂರ್ನಾಲ್ಕು ಜನರು ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾರು ಮಾತನಾಡುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ರೇಣುಕಾಚಾರ್ಯ ಮಾತನಾಡುತ್ತಿದ್ದಾರೆ. ಈ ಮೂವರಿಗೆ ಯಾವಾಗ ಮತ್ತು ಹೇಗೆ ಬುದ್ದಿ ಕಲಿಸಬೇಕು ಎಂಬುದು ಗೊತ್ತಿದೆ. ಸಮಯ ಬಂದಾಗ ಬುದ್ದಿ ಕಲಿಸುತ್ತೇವೆ. ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡುತ್ತಿರುವುದು ಸಿದ್ದರಾಮಯ್ಯ ಅವರೆ ಚಾಹೆಯಿಂದ. ಸ್ವಪಕ್ಷಕ್ಕೆ ಸಿದ್ದರಾಮಯ್ಯರೇ ವಿಲನ್, ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟ ಆಡುತ್ತಿದ್ದಾರೆ. ಇದೇ ಚಾಹೆ ಎಚ್.ವಿಶ್ವನಾಥ್ ಅವರಲ್ಲೂ ಉಳಿದುಕೊಂಡಿದೆ ಎಂದು ಕಿಡಿಕಾರಿದರು.
ನಾನು ಮುಖ್ಯಮಂತ್ರಿ ಬದಲಾವಣೆ ಸಂಬಂಧ ಮಾತನಾಡಿಲ್ಲ, ನನ್ನ ಇಲಾಖೆ ಅನುದಾನ ಹಂಚಿಕೆ ಬಗ್ಗೆ ಮಾತನಾಡಿ ರಾಜ್ಯಪಾಲರ ಜೊತೆ ಮಾತನಾಡಿದ್ದೆ. ಜೊತೆಗೆ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಸಿ.ಟಿ.ರವಿ ಅವರಿಗೆ ಮನವಿ ಮಾಡಿದ್ದೆ. ನಂತರ ಮಖ್ಯಮಂತ್ರಿಗಳು ನಮ್ಮ ಇಲಾಖೆಗೆ 1200 ಕೋಟಿ ರೂ ಬಿಡುಗಡೆ ಮಾಡಿ ಎಲ್ಲಾ ಶಾಸಕರಿಗೂ ಹಂಚಿಕೆ ಮಾಡುವಂತೆ ಹೇಳಿದ್ದಾರೆ. ನನ್ನ ಇಲಾಖೆಯಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಹೇಳಿದರು.