ಕೈ ಮುಗಿಯುತ್ತೇನೆ, ಸುಮಲತಾ- ಕುಮಾರಸ್ವಾಮಿಯ ವಿಚಾರ ಬಿಟ್ಟು ಬಿಡಿ: ಮಾಧ್ಯಮದವರಿಗೆ ಈಶ್ವರಪ್ಪ ಮನವಿ

Update: 2021-07-10 13:59 GMT

ಶಿವಮೊಗ್ಗ,ಜು.10: ನಾನು ನಿಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಸುಮಲತಾ ಮತ್ತು ಕುಮಾರಸ್ವಾಮಿಯವರ ವಿಚಾರ ಬಿಟ್ಟು ಬಿಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಮಾಧ್ಯಮದವರಿಗೆ ಮನವಿ ಮಾಡಿದರು.

ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನಿಮಗೆ ಬೇರೆ ಯಾವ ವಿಚಾರವೂ ಇಲ್ವಾ, ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳು ಇವೆ. ಅದನ್ನು ಬಿಟ್ಟು ಅವರು ಏನು ಹೇಳಿದ್ರು, ಇವರೇನು ಹೇಳಿದರು ಅಂತ ತೋರಿಸುತ್ತೀರಾ. ಇದಕ್ಕೇನಾದ್ರು ಅರ್ಥ ಇದೆಯಾ ಎಂದು ಪ್ರಶ್ನಿಸಿದರು.

ಈಗಾಗಲೇ ಕೆಆರ್‌ಎಸ್ ಬಿರುಕು ವಿಚಾರದ ಕುರಿತು ಮುರುಗೇಶ್ ನಿರಾಣಿ ಸರ್ಕಾರದ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ನಾನು ಅವರಿಬ್ಬರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಸಹೋದರಿ ಸುಮಲತಾ ಹಾಗೂ ಕುಮಾರಸ್ವಾಮಿ ಇಬ್ಬರ ಬಗ್ಗೆಯೂ ನನಗೆ ಗೌರವವಿದೆ. ಅವರಿಬ್ಬರು ವಾಗ್ವಾದ ನಿಲ್ಲಿಸಬೇಕು. ಅವರು ನಿಲ್ಲಿಸುತ್ತಾರೋ ಇಲ್ಲವೋ. ಟಿವಿಯವರು ಮೊದಲು ನಿಲ್ಲಿಸಿ ಎಂದು ಹೇಳಿದರು.

ಅವರಿಬ್ಬರು ಎಳೆದು ಕೊಂಡುಹೋಗ್ತಾರೆ, ನೀವು ಹೋಗ್ತಿರಾ ಎಂದು ಗರಂ ಆದ ಅವರು, ಜನ ಸಾಯುತ್ತಿದ್ದಾರೆ. ಅದರ ಬಗ್ಗೆ ನೋಡಿ. ನಾನು ಮಾಧ್ಯಮದವರನ್ನು ಟೀಕೆ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News