ನಟ ದರ್ಶನ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ. ವಂಚನೆಗೆ ಯತ್ನಿಸಿದ ಮಹಿಳೆ: ಪೊಲೀಸರಿಂದ ವಿಚಾರಣೆ

Update: 2021-07-11 17:20 GMT

ಮೈಸೂರು, ಜು.11: ನಟ ದರ್ಶನ್ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಯತ್ನಿಸಿರುವುದು ರವಿವಾರ ಬೆಳಕಿಗೆ ಬಂದಿದ್ದು, ವಂಚಿಸಲೆತ್ನಿಸಿದ ಮಹಿಳೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ನಟ ದರ್ಶನ್ ಮೈಸೂರಿನ ಎಸಿಬಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಂಗಳೂರು ಮೂಲದ ಮಹಿಳೆ ಅರುಣ ಕುಮಾರಿ ಎಂಬವರು ತಾವೊಬ್ಬ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಮೈಸೂರಿಗೆ ಬಂದು ದರ್ಶನ್ ಆಪ್ತ ಹರ್ಷ ಮೆಲಂಟಾ ಎಂಬವರನ್ನು ಭೇಟಿ ಮಾಡಿದ್ದರು. ನೀವು 25 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೀರಿ. ನಟ ದರ್ಶನ್ ಅವರ ನಕಲಿ ದಾಖಲೆಗಳನ್ನು ಒದಗಿಸಿದ್ದೀರಿ, ಇದನ್ನು ಬಹಿರಂಗ ಪಡಿಸಬಾರದೆಂದರೆ 25 ಲಕ್ಷ ರೂ. ನೀಡಿ' ಎಂದು ಹರ್ಷ ಮೆಲಂಟಾ ಅವರಿಗೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಜುಲೈ 3ರಂದು ಹರ್ಷ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಅರುಣ ಕುಮಾರಿ ಎಂಬವರ ವಿರುದ್ಧ ದೂರು ನೀಡಿದ್ದರು. ಈ ವಿಚಾರದಲ್ಲಿ ಅರುಣ ಕುಮಾರಿ ಎಂಬವರನ್ನು ವಶಕ್ಕೆ ಪಡೆದ ಪೊಲೀಸರಿಗೆ ಉಮಾಪತಿ ಹೆಸರು ಹೇಳಿದ್ದಾಳೆ ಎನ್ನಲಾಗಿದೆ.

ರವಿವಾರ ನಗರದ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ನಟ ದರ್ಶನ್ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ನಿರ್ಮಾಪಕ ಉಮಾಪತಿ ಕೂಡ ನಟ ದರ್ಶನ್ ಜೊತೆಗೆ ವಿಚಾರಣೆಗೆ ಬಂದಿದ್ದರು. ಈ ಬಗ್ಗೆ ಪ್ರಕರಣ ತನಿಖೆ ನಡೆಸುತ್ತಿರುವ ಡಿಸಿಪಿ ಪ್ರದೀಪ್ ಗುಂಠಿಯಿಂದ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಎಸಿಪಿ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ನನ್ನ ದಾಖಲೆ ಫೋರ್ಜರಿ ಮಾಡಿರುವುದು ತಿಳಿದು ಮೈಸೂರಿನ ಎಸಿಪಿ ಕಚೇರಿಗೆ ಬಂದಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಮಹಿಳೆ ನಕಲಿ ಬ್ಯಾಂಕ್ ಅಧಿಕಾರಿ ಎಂದು ಗೊತ್ತಾಗಿದೆ. ಒಂದು ವೇಳೆ ತನ್ನ ಜೊತೆಗಿದ್ದವರೆ ಈ ಷಡ್ಯಂತ್ರ ಮಾಡಿದ್ದರೆ ಅನ್ನೋದು ಗೊತ್ತಾದರೆ ಅವರ ತಲೆಯನ್ನೇ ತಗೆಯುತ್ತೇನೆ.

-ದರ್ಶನ್, ನಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News