ಕೋಲಾರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಐಟಿಯು ಧರಣಿ
ಕೋಲಾರ, ಜು.12: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕರ ಸಂಘದಿಂದ ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಿಕೃಷ್ಣ ಮಾತನಾಡಿ. ಕೋವಿಡ್ ಎರಡನೇ ಅಲೆಯ ಲಾಕ್ಡೌನ್ ಪರಿಹಾರವಾಗಿ 3000 ರೂ. ಎಲ್ಲಾ ನೊಂದಾಯಿತ ಕಾರ್ಮಿಕರಿಗೆ ತಕ್ಷಣ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಕೊರೊನಾ ಮೊದಲ ಅಲೆಯ ಲಾಕ್ಡೌನ್ ಸಂದರ್ಭದಲ್ಲಿ ಘೋಷಣೆಯಾಗಿದ್ದ 5000 ರೂ.ಗಳ ಪರಿಹಾರ ಇನ್ನು 1 ಲಕ್ಷ 20 ಸಾವಿರ ಫಲಾನುಭವಿಗಳಿಗೆ ನೀಡಿಲ್ಲ ಕೂಡಲೇ ಇವರಿಗೂ ಸಹ ಪರಿಹಾರ ನೀಡಬೇಕು ಕಾರ್ಮಿಕರಿಗೆ ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಪಾಲಿಸಿಲ್ಲ. ಇವುಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಜ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ಹಣದಲ್ಲಿ ವಿತರಿಸಲಾಗುತ್ತಿರುವ ರೇಷನ್ ಕಿಟ್ಗಳ ಮೇಲೆ ಅಳವಡಿಸಿರುವ ಸ್ಟಿಕ್ಕರ್ಅನ್ನು ತೆಗೆದು ಬಿಜೆಪಿಯ ಶಾಸಕರ ಫೋಟೋಗಳನ್ನು ಅಂಟಿಸಿ ಹಂಚುತ್ತಿರುವುದು ಸರಿಯಲ್ಲ. ರಾಜಕೀಯ ಹಿತಾಸಕ್ತಿಗಾಗಿ ಮಂಡಳಿಯ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ. ಮಂಡಳಿಯ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ತೀರ್ಮಾನಗಳನ್ನು ಮಾಡುತ್ತಿರುವುದು ಕಾನೂನಿನ ಉಲ್ಲಂಘಟನೆಯಾಗಿದೆ ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು.
ಕಟ್ಟಡ ಕಾರ್ಮಿಕ ಸಂಘ ಜಿಲ್ಲಾ ಸಹಕಾರ್ಯದರ್ಶಿ ಆಶಾ ಮಾತನಾಡಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಕಟ್ಟಡ ಕಾರ್ಮಿಕರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಕೋವಿಡ್ ಸೋಂಕಿಗೆ ಆಸ್ಪತ್ರೆಯ ಚಿಕಿತ್ಸೆ ವೆಚ್ಚವನ್ನು ಭರಿಸಬೇಕು ನೊಂದಾಯಿತ ಕಟ್ಟಡ ಕಾರ್ಮಿಕರ ಆಸ್ಪತ್ರೆಯಲ್ಲಿ ಖರ್ಚು ಮಾಡಿದ ಪೂರ್ಣ ಹಣವನ್ನು ವೈದ್ಯಕೀಯ ಸಹಾಯಧನದಡಿ ನೀಡಬೇಕು ಸಹಜ ಮರಣ ಪರಿಹಾವನ್ನು ಕನಿಷ್ಠ 2 ಲಕ್ಷಕ್ಕೆ ಏರಿಸಬೇಕು.
ನೊಂದಾಯಿತ ಕಟ್ಟಡ ಕಾರ್ಮಿಕ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನವನ್ನು ನೀಡಬೇಕು.ಅಡುಗೆ ಅನಿಲ ಸೌಲಭ್ಯ, ಅಂಗವಿಕಲ ಪರಿಕರಕೊಳ್ಳಲು ಸಹಾಯಧವನ್ನು ನೀಡಬೇಕು ಶೈಕ್ಷಣಿಕ ಸಹಾಯಧನ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಿದ ತಕ್ಷಣ ಸಹಾಯಧವನ್ನು ಪಾವತಿ ಮಾಡಬೇಕು.ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೈಜ ಕಟ್ಟಡ ಕಾರ್ಮಿಕರನ್ನು ನೊಂದಾಯಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯ ನೇತೃತ್ವವನ್ನು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ಸುಶೀಲಾ, ನಾರಾಯಣಮ್ಮ, ಸುನಂದಾ,ಮಾದೇಶ್, ಅಶೋಕರಾವ್ ನಾರಾಯಣಪ್ಪ, ರಾಮಚಂದ್ರಪ್ಪ, ಅಂಜಿನಪ್ಪ, ನಾಗರಾಜ್ ಅಂಬರೀಷ್, ಗೋಪಾಲಕೃಷ್ಣ ಮುಂತಾದವರು ಇದ್ದರು.