ಚಿಕ್ಕಮಗಳೂರು: ಹೊತ್ತಿ ಉರಿದ ಕಾರು; 6 ಮಂದಿಗೆ ಗಾಯ

Update: 2021-07-12 18:41 GMT

ಹನೂರು, ಜು.12: ಜಿಲ್ಲೆಯ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ತೆರಳುತ್ತಿದ್ದ ವೇಳೆ ಕಾರಿನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಘಾತಕ್ಕೊಳಗಾಗಿ 6 ಜನರು ಗಾಯಗೊಂಡಿರುವ ಘಟನೆ ತಾಳುಬೆಟ್ಟದ ಸಮೀಪ ನಡೆದಿದೆ. 

ಮೈಸೂರು ಜಿಲ್ಲೆ ವಾಜಮಂಗಲ ಗ್ರಾಮದ ಬಸವರಾಜು (23), ಗಣೇಶ್ (23), ನವೀನ್ (23), ಪ್ರತಾಪ್ (25), ಶ್ರೀನಿವಾಸ್ (25), ಹಾಗೂ ಅಜಯ್ ಎಂಬುವವರೇ ಗಾಯಗೊಂಡವರು. 

ಇವರು ಭಾನುವಾರ ತಡರಾತ್ರಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪೂಜೆಗಾಗಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತಾಳುಬೆಟ್ಟದ ಬಳಿ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಮುಗುಚಿ ಬಿದ್ದು 6 ಜನರು ಗಾಯಗೊಂಡರು. ಈ ವೇಳೆ ಗಾಯಾಳುಗಳನ್ನು ಸಾರ್ವಜನಿಕರ ಸಹಕಾರದಿಂದ 108 ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರಲ್ಲಿ ಬಸವರಾಜು ಹಾಗೂ ಗಣೇಶ್ ಎಂಬುವವರಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News