ಮೈಸೂರು: ಮುಂದುವರಿದ ಎನ್ಟಿಎಂ ಶಾಲೆ ಉಳಿಸಿ ಹೋರಾಟ; ವಿವಿಧ ಸಂಘಟನೆಗಳಿಂದ ಹೋರಾಟಕ್ಕೆ ಬೆಂಬಲ
Update: 2021-07-12 17:44 GMT
ಮೈಸೂರು,ಜು.12: ಎನ್ ಟಿಎಂ ಶಾಲೆ ಉಳಿಸಿ ಹೋರಾಟ 15ನೇ ದಿನಕ್ಕೆ ಕಾಲಿರಿಸಿದೆ. ವಿವಿಧ ಸಂಘಟನೆಗಳು ಈ ಹೋರಾಟಕ್ಕೆ ಕೈಜೋಡಿಸಿವೆ.
ಸೋಮವಾರ ರಾಜ್ಯ ರೈತ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ನಾವು ಸ್ವಾಮಿ ವಿವೇಕಾನಂದರ ವಿರೋಧಿಗಳಲ್ಲ,ಅವರೇ ಪ್ರತಿಪಾದಿಸಿದ ಶಿಕ್ಷಣದ ಮೌಲ್ಯವನ್ನು ಕಾಪಾಡುವ ಸಲುವಾಗಿ ಹೋರಾಟಕ್ಕೆ ಇಳಿದಿದ್ದೇವೆ. ಸ್ವಾಮಿ ವಿವೇಕಾನಂದರ ಆಶಯಗಳಿಗೆ ಅನುಗುಣವಾಗಿ ಆರಂಭವಾದ ಎನ್ ಟಿಎಂ ಶಾಲೆಯ ಉಳಿವಿಗಾಗಿ ಹೋರಾಟ ನಡೆಸಿದ್ದೇವೆ ಎಂದು ಹೋರಾಟಗಾರರು ತಿಳಿಸಿದರು.
ಶಾಲೆ ಉರುಳಿಸಿ ಸ್ಮಾರಕ ನಿರ್ಮಿಸಿದರೆ ಸ್ವಾಮಿ ವಿವೇಕಾನಂದರು ಹೇಳಿದ ತತ್ವಗಳಿಗೆ ವಿರುದ್ಧವಾಗುತ್ತದೆ. ಸ್ವಾಮಿ ವಿವೇಕಾನಂದ ಅವರಿಗೆ ಅಪಚಾರವಾಗುವುದನ್ನು ರಾಮಕೃಷ್ಣ ಆಶ್ರಮದವರು ತಪ್ಪಿಸಬೇಕು. ಶಾಲೆಯು ಕನ್ನಡದ ಅಸ್ಮಿತೆಯಾಗಿದೆ. ಈ ಅಸ್ಮಿತೆಗಾಗಿ ನಾವು ಹೋರಾಡುತ್ತಿದ್ದೇವೆಯೇ ಹೊರತು ಭೂಮಿಯ ಮಾಲಕತ್ವಕ್ಕಾಗಿ ಅಲ್ಲ ಎಂದು ತಿಳಿಸಿದರು.