ಚಿಕ್ಕಮಗಳೂರು: ಹೃದಯಾಘಾತದಿಂದ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನ

Update: 2021-07-12 17:47 GMT

ಚಿಕ್ಕಮಗಳೂರು, ಜು.12: ಗ್ರಾಮೀಣ ಪ್ರದೇಶದ ಸಣ್ಣ ಪತ್ರಿಕೆಯಿಂದ ರಾಜ್ಯ ಮಟ್ಟದ ಹೆಸರಾಂತ ಹಾಯ್‍ಬೆಂಗಳೂರ್ ಸೇರಿದಂತೆ ವಿವಿಧ ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ(43) ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾ.ಪಂ ವ್ಯಾಪ್ತಿಯ ಹೆಗ್ಗರವಳ್ಳಿ ಗ್ರಾಮದವರಾದ ಸುನೀಲ್ ಹೆಗ್ಗರವಳ್ಳಿ ಅವರಿಗೆ ಸೋಮವಾರ ಮಧ್ಯಾಹ್ನದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಕುಟುಂಬಸ್ಥರು ಅವರನ್ನು ಗೋಣಿಬೀಡು ಸರಕಾರಿ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಸುನೀಲ್ ಹೆಗ್ಗರವಳ್ಳಿ ಪತ್ನಿ, ಓರ್ವ ಪುತ್ರ ತಂದೆ, ತಾಯಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕಾಲೇಜು ದಿನಗಳಲ್ಲಿಯೇ ಬರವಣಿಗೆ ಮೂಲಕ ಗಮನ ಸೆಳೆದಿದ್ದ ಸುನೀಲ್ ಹೆಗ್ಗರವಳ್ಳಿ ಆರಂಭದಲ್ಲಿ ಮೂಡಿಗೆರೆ ಪಟ್ಟಣದಲ್ಲಿ ತಮ್ಮದೆ ಆದ ಪತ್ರಿಕೆಯೊಂದನ್ನು ಆರಂಭಿಸಿದ್ದರು. ಈ ವೇಳೆ ಎಡಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಅವರು  ಹಾಯ್‍ಬೆಂಗಳೂರ್ ಪತ್ರಿಕೆಯ ರವಿ ಬೆಳಗೆರೆ ಅವರ ಬರವಣಿಗೆಗಳಿಂದ ಪ್ರಭಾವಿತರಾಗಿದ್ದರು. ಮೂಡಿಗೆರೆಯಿಂದ ಬೆಂಗಳೂರಿಗೆ ತೆರಳಿದ ಅವರು ನೇರವಾಗಿ ರವಿಬೆಳೆಗೆರೆ ಅವರನ್ನು ಭೇಟಿ ಮಾಡಿ ಆ ಪತ್ರಿಕೆಯ ವರದಿಗಾರನಾಗಿ ಕೆಲಸ ಗಿಟ್ಟಿಸಿಕೊಂಡಿದ್ದರು. ಹಾಯ್‍ಬೆಂಗಳೂರು ಪತ್ರಿಕೆಯಲ್ಲಿ ಕ್ರೈಂ ವರದಿಗಾರಿಕೆ ಹಾಗೂ ಈಟಿವಿಯಲ್ಲಿ ರವಿ ಬೆಳಗೆರೆ ಅವರ ಕ್ರೈಂ ಡೈರಿ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದ್ದ ಅವರು ರವಿ ಬೆಳಗೆರೆಯೊಂದಿಗೆ ಮನಸ್ತಾಪ ಮಾಡಿಕೊಂಡು ಪತ್ರಿಕೆಯಿಂದ ಹೊರಬಂದಿದ್ದರು.

ಬಳಿಕ ಕೆಲ ರ್ವಗಳ ಕಾಲ ಕೆಲವು ಖಾಸಗಿ ವಾಹಿನಿಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದ ಅವರು, ಅಲ್ಲಿಯೂ ನೆಲೆ ಕಾಣದೇ ತಮ್ಮದೇಯಾದ ಚಾರ್ಲಿ ಟೈಮ್ಸ್ ಎಂಬ ಪತ್ರಿಕೆಯನ್ನು ಆರಂಭಿಸಿದ್ದರು. ಇತ್ತೀಚೆಗೆ ಹುಟ್ಟೂರು ಹೆಗ್ಗರವಳ್ಳಿ ಗ್ರಾಮಕ್ಕೆ ಹಿಂದಿರುಗಿದ್ದ ಅವರು ಹೊಸ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರ ಬೆಳಗಿನವರೆಗೂ ಚೆನ್ನಾಗಿಯೇ ಇದ್ದ ಅವರು ಮಧ್ಯಾಹ್ನದ ವೇಳೆ ಮನೆಯಲ್ಲಿ ಎದೆ ನೋವಿನಿಂದ ಕುಸಿದು ಬಿದ್ದಿದ್ದ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News