ಕೊರೋನದಿಂದ ಮೃತಪಟ್ಟ 10 ಸಾವಿರಕ್ಕೂ ಅಧಿಕ ರೈತರ 79.47 ಕೋಟಿ ರೂ.ಸಾಲ ಮನ್ನಾಕ್ಕೆ ಚಿಂತನೆ: ಸಚಿವ ಸೋಮಶೇಖರ್

Update: 2021-07-14 13:40 GMT

ಬೆಂಗಳೂರು, ಜು.14: ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‍ಗಳಲ್ಲಿ ಸಾಲ ಪಡೆದಿದ್ದ, ಕೊರೋನದಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದು, ಇನ್ನು ಮೂರು, ನಾಲ್ಕು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಇನ್ನು ಮೂರರಿಂದ ನಾಲ್ಕು ದಿನದಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿ ಹಾಗೂ ನಮ್ಮ ಸರಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಸಾಲಿನಲ್ಲಿ ಸಾಲ ಪಡೆದವರ ಮಾಹಿತಿ: ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10,187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿ ಚಿಂತನೆಯನ್ನು ನಡೆಸಿದ್ದಾರೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಜಿಲ್ಲಾವಾರು ಡಿಸಿಸಿ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲದ ಮಾಹಿತಿ

ಬಾಗಲಕೋಟೆ- 672 ರೈತರ 5,42,26,261 ರೂಪಾಯಿ, ಬೆಳಗಾವಿ–3334 ರೈತರ 23,84,51,700 ರೂಪಾಯಿ, ಬಳ್ಳಾರಿ–357 ರೈತರ 3,65,98,411 ರೂಪಾಯಿ, ಬೆಂಗಳೂರು–381 ರೈತರ 2,36,72,500 ರೂಪಾಯಿ, ಬೀದರ್–824 ರೈತರ 5,47,68,271 ರೂಪಾಯಿ, ಚಿಕ್ಕಮಗಳೂರು–113 ರೈತರ 2,03,86,020 ರೂಪಾಯಿ, ಚಿತ್ರದುರ್ಗ–156 ರೈತರ 1,63,71,000 ರೂಪಾಯಿ.

ದಾವಣಗೆರೆ–402 ರೈತರ 2,66,22,071 ರೂಪಾಯಿ, ಹಾಸನ–454 ರೈತರ 2,86,42,000 ರೂಪಾಯಿ, ಕಲಬುರಗಿ– 224 ರೈತರ 873877643 ರೂಪಾಯಿ, ಕೆನರಾ ಶಿರಸಿ(ಉತ್ತರ ಕನ್ನಡ)-186 ರೈತರ 1,70,98,364 ರೂಪಾಯಿ, ಕೆಸಿಸಿ ಬ್ಯಾಂಕ್ ಧಾರವಾಡ– 376 ರೈತರ 20710455 ರೂಪಾಯಿ, ಕೊಡಗು– 113 ರೈತರ 18299040 ರೂಪಾಯಿ, ಕೋಲಾರ–147 ರೈತರ 25409639 ರೂಪಾಯಿ, ಮಂಡ್ಯ–410 ರೈತರ 27328268 ರೂಪಾಯಿ.

ಮೈಸೂರು– 281 ರೈತರ 31399000 ರೂಪಾಯಿ, ರಾಯಚೂರು-237 ರೈತರ 19203700 ರೂಪಾಯಿ, ಶಿವಮೊಗ್ಗ– 307 ರೈತರ 32701000 ರೂಪಾಯಿ, ದಕ್ಷಿಣ ಕನ್ನಡ– 152 ರೈತರ 24063450 ರೂಪಾಯಿ, ತುಮಕೂರು– 307 ರೈತರ 18722000 ರೂಪಾಯಿ, ವಿಜಯಪುರ– 754 ರೈತರ 51340000 ರೂಪಾಯಿ ಸಾಲ ಇದೆ. ಒಟ್ಟಾರೆಯಾಗಿ 10187 ರೈತರ 79,47,51,926.43 ರೂಪಾಯಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿ ಸಿದ್ಧವಾಗಿದೆ ಎಂದು ಸೋಮಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೊರೋನ ಸಂಕಷ್ಟದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ರೈತರ ಸಹಾಯಕ್ಕೆ ಧಾವಿಸಬೇಕೆಂಬುದು ಮುಖ್ಯಮಂತ್ರಿಯ ಅಭಿಲಾಷೆಯಾಗಿದೆ. ಇಂತಹ ಸಂಕಷ್ಟದಲ್ಲಿರುವ ರೈತ ಕುಟುಂಬಕ್ಕೆ ಸಹಾಯ ಮಾಡಬೇಕು. ಅವರ ಸಂಕಷ್ಟದಲ್ಲೂ ಭಾಗಿಯಾಗಬೇಕು ಎಂಬುದು ಮುಖ್ಯಮಂತ್ರಿ ಹಾಗೂ ಸರಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಇಂಥದ್ದೊಂದು ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿಯ ಸೂಚನೆ ಮೇರೆಗೆ ತೆಗೆದುಕೊಳ್ಳಲಾಗುತ್ತಿದೆ.

-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News