ಎಂಎಸ್‍ಐಎಲ್ ಮದ್ಯದ ಮಳಿಗೆ ತೆರೆಯುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2021-07-16 13:26 GMT

ಬೆಂಗಳೂರು, ಜು.16: ರಾಜ್ಯದಲ್ಲಿ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‍ಐಎಲ್) ಮದ್ಯದ ಮಳಿಗೆಗಳನ್ನು ತೆರೆಯುವ ಸರಕಾರದ ನಿರ್ಧಾರ ಪ್ರಶ್ನಿಸಿ ಬಾರ್ ಮಾಲಕರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.

ಅಬಕಾರಿ ನಿಯಮ 3(11) ಉಲ್ಲಂಘಿಸಿ ರಾಜ್ಯ ಸರಕಾರ ಎಂಎಸ್‍ಐಎಲ್ ಮದ್ಯದ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕ ಭಾಗದ ಹಲವು ಖಾಸಗಿ ಮದ್ಯದ ಅಂಗಡಿಗಳ ಮಾಲಕರು ಅರ್ಜಿ ಸಲ್ಲಿಸಿದ್ದರು.

ಈ ಆರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಬಾರ ಮಾಲಕರ ಮನವಿ ವಜಾಗೊಳಿಸಿ, ಸರಕಾರದ ನಿರ್ಣಯವನ್ನು ಎತ್ತಿಹಿಡಿದಿದೆ.

ವಿಚಾರಣೆ ವೇಳೆ ಎಂಎಸ್‍ಐಎಲ್ ಪರ ವಾದಿಸಿದ್ದ ವಕೀಲರು, ಒಂದು ಪ್ರದೇಶದ ಜನಸಂಖ್ಯೆ ಆಧರಿಸಿ ಮದ್ಯದ ಮಳಿಗೆಗಳಿಗೆ ಪರವಾನಿಗೆ ನೀಡಬೇಕು. ಅದರಂತೆ ಎಂಎಸ್‍ಐಎಲ್‍ಗೆ ಮಳಿಗೆಗಳನ್ನು ತೆರೆಯಲು ಸರಕಾರ ಸಮ್ಮತಿಸಿದೆ. ಈ ವೇಳೆ ಎಮ್‍ಎಸ್‍ಐಎಲ್‍ಗೆ ಲೈಸೆನ್ಸ್ ನೀಡುವಾಗ ಅಕ್ಕಪಕ್ಕದ ಮದ್ಯದಂಗಡಿಗಳ ಪರವಾನಿಗೆ ರದ್ದುಪಡಿಸಿಲ್ಲ. ಹೀಗಾಗಿ ಎಂಎಸ್‍ಐಎಲ್‍ಗೆ ಲೈಸೆನ್ಸ್ ನೀಡುವ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರ ಬಾರ್ ಮಾಲಕರಿಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ವಾದ ಪರಿಗಣಿಸಿದ ಪೀಠ, ಕರ್ನಾಟಕ ಅಬಕಾರಿ ಕಾಯ್ದೆ-1965 ಹಾಗೂ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು-1968ರ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಸರಕಾರ ಮದ್ಯದ ಮಳಿಗೆಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದೆ. ಇನ್ನು ಮದ್ಯ ಮಾರಾಟ ಮಾಡುವುದು ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯಪಟ್ಟು, ಬಾರ್ ಮಾಲಕರ ಅರ್ಜಿಗಳನ್ನು ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News