ಕಲಬುರಗಿ: ಪೊಲೀಸರ ವಶದಲ್ಲಿದ್ದ ಆರೋಪಿ ಸಾವು

Update: 2021-07-19 13:48 GMT

ಕಲಬುರಗಿ, ಜು.19: ಮೊಬೈಲ್ ಕಳವು ಆರೋಪ ಪ್ರಕರಣ ಸಂಬಂಧ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದೂರು ಕೇಳಿಬಂದಿದೆ.

ಇಲ್ಲಿನ ಎಂಬಿ ನಗರ ಠಾಣೆ ಪೊಲೀಸರ ವಶದಲ್ಲಿದ್ದ ಹೈದರಾಬಾದ್ ಮೂಲದ ಚಂದ್ರು(30) ಎಂಬಾತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕಲಬುರಗಿ ನಗರದ ಪೂಜಾ ಕಾಲನಿಯಲ್ಲಿ ವಾಸವಿದ್ದ ಚಂದ್ರು ಅನ್ನು ಮೊಬೈಲ್ ಕಳವು ಆರೋಪದಡಿ ಪೊಲೀಸರು ಬಂಧಿಸಿದ್ದರು. ಇನ್ನು, ಈತನ ಜೊತೆಗಿದ್ದ ಇನ್ನೋರ್ವ ಆರೋಪಿ ಮಹೇಶ್ ಎಂಬಾತ ಪರಾರಿಯಾಗಿದ್ದ. ಆರೋಪಿ ಚಂದ್ರುವನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತಿತ್ತು. ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಪೊಲೀಸರು ಠಾಣೆಯಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಎಂಬಿ ನಗರ ಠಾಣೆ ಪೊಲೀಸರ ವಶದಲ್ಲಿದ್ದ ಈತನ ಸಾವು ಲಾಕಪ್‌ ಡೆತ್ ಅಥವಾ ಆಕಸ್ಮಿಕವೇ ಎಂಬುದನ್ನು ಪತ್ತೆ ಮಾಡಲು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ, ಎಸಿಪಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News