ನಾಯಕತ್ವ ಬದಲಾವಣೆ ವಿಚಾರ: ಸಿಎಂ ಬಿಎಸ್ ವೈ ಬೆಂಬಲಕ್ಕೆ ನಿಂತ ಶಾಸಕ ಎನ್‌.ಮಹೇಶ್‌

Update: 2021-07-22 14:47 GMT

ಚಾಮರಾಜನಗರ: ರಾಜಕೀಯದಲ್ಲಿ 45 ವರ್ಷಗಳ ಅನುಭವ ಹೊಂದಿರುವ ಹಾಗೂ ಅತೀ ಬುದ್ಧಿವಂತ ರಾಜಕಾರಣಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ಸರಿಯಲ್ಲ ಎಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌  ಗುರುವಾರ ಹೇಳಿದರು. 

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎನ್. ಮಹೇಶ್, ‘ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಅವರು ಜನನಾಯಕರಾಗಿದ್ದಾರೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲೂ ಜನರ ಕಷ್ಟಕ್ಕೆ ಸ್ಪಂದಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ರಾಜ್ಯದ ಮೂಲೆ ಮೂಲೆಯ ಬಗ್ಗೆಯೂ ಅವರಿಗೆ ತಿಳಿದಿದೆ. ಇಂತಹ ಮುಖ್ಯಮಂತ್ರಿಯನ್ನು ಹೇಗೆ ಬದಲಾವಣೆ ಮಾಡುತ್ತಾರೆ’ ಎಂದು ಪ್ರಶ್ನಿಸಿದರು. 

‘ಯಡಿಯೂರಪ್ಪ ಅವರು ಎಲ್ಲ ಶಾಸಕರನ್ನು ಒಂದೇ ರೀತಿ ನೋಡುತ್ತಾರೆ. ತಾರತಮ್ಯ ಮಾಡುವುದೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಆದರೆ, ಹೊಸಬರು 5 ರಿಂದ 6 ತಿಂಗಳ ಕಾಲ ಕಷ್ಟ ಪಡಬೇಕಾಗುತ್ತದೆ. ಕಾರಣ ಅವರಿಗೆ ರಾಜ್ಯದ ವಾಸ್ತವ ಸ್ಥಿತಿ ಸರಿಯಾಗಿ ತಿಳಿದಿರುವುದಿಲ್ಲ. ರಾಜ್ಯದಲ್ಲಿ ಕೆಲ ತಿಂಗಳ ಕಾಲ ಗೊಂದಲ ಸೃಷ್ಟಿಯಾಗುತ್ತದೆ ಮತ್ತು ಆಡಳಿತವೂ ಉತ್ತಮವಾಗಿ ನಡೆಯುವುದಿಲ್ಲ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News