ಬ್ಲ್ಯಾಕ್‍ಮೇಲ್‍ಗೆ ಹೆದರುವುದಿಲ್ಲ: ಶಾಸಕ ರೇಣುಕಾಚಾರ್ಯ

Update: 2021-07-22 16:01 GMT

ಬೆಂಗಳೂರು, ಜು. 22: `ಜೀವನದಲ್ಲಿ ಈ ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ. ಹಾಗಾಗಿ, ಸಿಡಿಯಂತಹ ಷಡ್ಯಂತ್ರದಲ್ಲಿ ಸಿಲುಕುವ ವ್ಯಕ್ತಿ ನಾನಲ್ಲ. ನಾನು ಯಾವುದೇ ಬ್ಲಾಕ್‍ಮೇಲ್‍ಗಳಿಗೂ ಹೆದರುವುದಿಲ್ಲ, ವಿಚಲಿತನಾಗುವುದೂ ಇಲ್ಲ' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸಿಡಿ ಸೇರಿದಂತೆ ಯಾವುದೇ ಷಡ್ಯಂತ್ರಕ್ಕೂ ನಾನು ಹೆದರುವುದಿಲ್ಲ. ಹಿಂದೆ ಜೀವನದಲ್ಲಿ ಯಾವ ತಪ್ಪು ಮಾಡಿದ್ದೆನೋ ಆ ತಪ್ಪಿನ ಅರಿವು ನನಗಾಗಿದೆ. ಹೀಗಾಗಿ ಷಡ್ಯಂತ್ರಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ನಾನು ತಪ್ಪು ಮಾಡಿದರೆ, ನನ್ನ ಕುಟುಂಬ ಸದಸ್ಯರು ಕೇಳುತ್ತಾರೆ, ಶಿಕ್ಷೆ ಕೊಡುತ್ತಾರೆ' ಎಂದು ತಿಳಿಸಿದರು.

`ಯಾರಾದರೂ  ಬ್ಲ್ಯಾಕ್‍ಮೇಲ್ ಮಾಡಿದರೆ, ಈ ರಾಜಕಾರಣದಲ್ಲಿ ರೇಣುಕಾಚಾರ್ಯ ಯಾವತ್ತೂ ಅದಕ್ಕೆಲ್ಲ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಾನು ನಾನಾಗಿಯೇ ಇರುತ್ತೇನೆ. ಯಾವತ್ತೂ ವಿಚಲಿತನಾಗಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದರೆ, ತಪ್ಪಿನ ಅರಿವನ್ನು ಅರಿತುಕೊಂಡು ನಾನೊಬ್ಬ ಪ್ರಬುದ್ಧ ಮನುಷ್ಯನಾಗಿ ರಾಜಕಾರಣ ಮಾಡುತ್ತೇನೆಯೇ ಹೊರತು, ಬ್ಲಾಕ್‍ಮೇಲ್ ತಂತ್ರಗಾರಿಕೆ ಯಾವತ್ತೂ ನನ್ನ ಬಳಿ ನಡೆಯುವುದಿಲ್ಲ' ಎಂದು ತಿರುಗೇಟು ನೀಡಿದರು.

`ಸಿಡಿ ಬಿಡುಗಡೆಯಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಬಗ್ಗೆ ಇದುವರೆಗೂ ಯೋಚನೆ ಮಾಡಿಲ್ಲ. ನನಗೆ ಏನೂ ಗೊತ್ತಿಲ್ಲ. ನಾನು ನಮ್ಮ ರಾಜ್ಯ ನಾಯಕರನ್ನು, ಸಚಿವರನ್ನು ಭೇಟಿ ಮಾಡಲು ಬಂದಿದ್ದೇನೆ ಅಷ್ಟೇ. ಮಾಧ್ಯಮಗಳು ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ನನ್ನನ್ನು ಕೇಳಿದಾಗ ನನಗೆ ಆಶ್ಚರ್ಯವಾಗಿದೆ. ನಾನು ಎಂದಿಗೂ ವಿಚಲಿತನಾಗುವುದಿಲ್ಲ' ಎಂದು ರೇಣುಕಾಚಾರ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News