×
Ad

ಹೈಕಮಾಂಡ್ ನಡುವಿನ ಒಪ್ಪಂದದಂತೆ ಯಡಿಯೂರಪ್ಪ ರಾಜೀನಾಮೆ: ಸಂಸದ ಶ್ರೀನಿವಾಸ್ ಪ್ರಸಾದ್

Update: 2021-07-23 17:29 IST

ಚಾಮರಾಜನಗರ,ಜು.23: ಹೈಕಮಾಂಡ್ ನಡುವಿನ ಒಪ್ಪಂದದಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆಂದು ಸಂಸದ ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಜಿಲ್ಲಾ ಗ್ರಂಥಾಲಯ ಕಟ್ಟಡಕ್ಕೆ ಶಂಕು ಸ್ಥಾಪನಾ ಸಮಾರಂಭಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 75 ವರ್ಷ ಮೇಲ್ಪಟ್ಟವರಿಗೆ ಆಯಕಟ್ಟಿನ ಹುದ್ದೆ ನೀಡಬಾರದೆಂಬ ಪಕ್ಷದ ನಿಲುವು ಇದೆ. ಆದರೂ ಯಡಿಯೂರಪ್ಪ ಅವರಿಗಾಗಿ ನಿಯಮ ಬದಲಿಸಿ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಎರಡು ವರ್ಷಗಳ ಬಳಿಕ ರಾಜೀನಾಮೆ ಕೊಡಬೇಕೆಂದೂ ಒಪ್ಪಂದ ಆಗಿತ್ತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ  ರಾಜೀನಾಮೆ ಕೊಡಲಿದ್ದಾರೆ, ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಅವರನ್ನು ಬಹಳ ಗೌರವಯುತವಾಗಿ ನೋಡಿಕೊಂಡಿದೆ. ಈ ಹಿನ್ನೆಲೆ ರಾಜೀನಾಮೆ ಕೊಡುವ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಹೈಕಮಾಂಡ್ ಮತ್ತು ಬಿಎಸ್ ವೈ ನೆಡುವಿನ ಅವರ ವಿಚಾರ ಇದಾಗಿದ್ದು, ಮೂರನೇಯವರು ಮಾತನಾಡಬಾರದು, ಸ್ವಾಮೀಜಿಗಳು ಯಡಿಯೂರಪ್ಪ ಅವರೇ ಮುಂದುವರೆಯಬೇಕೆಂದು ಹೇಳುತ್ತಿದ್ದಾರೆ. ಸ್ವಾಮೀಜಿಗಳೇನು ಸೂಪರ್ ಹೈಕಮಾಂಡಾ..? ಎಂದು ಮಠಾಧೀಶರ ವಿರುದ್ಧ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.

ಇದೇ ವೇಳೆ ಎಚ್.ವಿಶ್ವನಾಥ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಹೇಳಿಕೆಗಳಿಗೆ ಚಿಕ್ಕಾಸಿನ ಬೆಲೆಯಿಲ್ಲ, ನಾವು ಪಕ್ಷ ಕಟ್ಟಿದವರಲ್ಲ ಬೇರೆ ಪಕ್ಷದಲ್ಲಿ ಅನ್ಯಾಯ ಆಯಿತೆಂದು ನಾನು, ವಿಶ್ವನಾಥ್ ಇಲ್ಲಿಗೆ ಬಂದವರು, ಪಕ್ಷ ಬಲಪಡಿಸುವ ಕೆಲಸ ಮಾಡಬೇಕೇ ಹೊರತು ಹೊರೆಯಾಗಬಾರದು, ತೆವಳಿಗೆಲ್ಲಾ ಹೇಳಿಕೆ ಕೊಡಬಾರದು, ನಾನೇನು ಹೈಕಮಾಂಡಾ, ವಿಶ್ವನಾಥ್ ಹೈ ಕಮಾಂಡಾ ಎಂದು ವಿಶ್ವನಾಥ್ ವಿರುದ್ಧ ಶ್ರೀನಿವಾಸಪ್ರಸಾದ್ ಅವರು ವಾಗ್ದಾಳಿ ನಡೆಸಿದರು.

ದಲಿತ ಸಿಎಂ ಮಾಡಲು ಈಗ ಬಿಜೆಪಿಗೆ ಅವಕಾಶವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ್ ಪ್ರಸಾದ್, ದಲಿತ ಸಿಎಂ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು ಎಂದು ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News