ಭವಿಷ್ಯದ ನಾಯಕನ ಹುಡುಕಾಟ: ಬಿಜೆಪಿ ವರಿಷ್ಟರಿಗೆ ತಲೆನೋವು!

Update: 2021-07-23 14:11 GMT

ಬೆಂಗಳೂರು, ಜು. 23: ಹೈಕಮಾಂಡ್ ಸೂಚಿಸಿದರೆ `ರಾಜೀನಾಮೆ ನೀಡಲು ಸಿದ್ದ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ ಬೆನ್ನಲ್ಲೆ ಸಮರ್ಥ, ಭವಿಷ್ಯದ ನಾಯಕನ ಹುಡುಕಾಟ ಬಿಜೆಪಿ ವರಿಷ್ಟರಿಗೆ ತೀವ್ರ ತಲೆನೋವಾಗಿದ್ದು, ಯಾರನ್ನೂ ಆಯ್ಕೆ ಮಾಡುವುದು ಎಂಬ ಧರ್ಮ ಸಂಕಟಕ್ಕೆ ಸಿಲುಕಿದೆ.

ಸಂಘ ಪರಿವಾರದ ಪ್ರಮುಖರಾದ ಮುಕುಂದ್ ಜೀ ಅವರನ್ನು ಬಿಜೆಪಿ ವರಿಷ್ಟರು ನೂತನ ನಾಯಕನ ಆಯ್ಕೆಯ ಸಂಬಂಧ ಚರ್ಚಿಸಲು ದಿಲ್ಲಿಗೆ ಕರೆಸಿಕೊಂಡಿದ್ದು, ಮುಕುಂದ್ ಜೀ ಅವರು ಇಂದು ದಿಲ್ಲಿಗೆ ತೆರಳಿದ್ದು, ನಾಳೆ ಅವರು ವರಿಷ್ಟ ನಾಯಕರ ಜತೆ ಹೊಸ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ನೂತನ ಮುಖ್ಯಮಂತ್ರಿ ಹುದ್ದೆಗೆ ವರಿಷ್ಟರು ಸೂಚಿಸಿದ ಕೆಲವು ಹೆಸರುಗಳಿಗೆ ಸಂಘ ಪರಿವಾರದ ಪ್ರಮುಖರಿಂದ ಸಹಮತಿ ಸಿಗದ ಕಾರಣ ಎಲ್ಲರಿಗೂ ಒಪ್ಪಿತನಾಗುವ ನಾಯಕನ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ್ ಬೆಲ್ಲದ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

ರಾಜ್ಯದ ಪ್ರಬಲ ಸಮುದಾಯವಾಗಿ ಬಿಜೆಪಿಯ ಮುಖ್ಯ ವೋಟ್ ಬ್ಯಾಂಕ್ ಆಗಿರುವ ವೀರಶೈವ ಲಿಂಗಾಯತ ಸಮುದಾಯವರನ್ನೇ ಮುಖ್ಯಮಂತ್ರಿ ಹುದ್ದೆಗೆ ಕೂರಿಸಬೇಕೆಂಬ ಕೂಗು ಬಲವಾಗಿದೆ. ಹೀಗಾಗಿ, ಸಚಿವ ಮುರುಗೇಶ್ ನಿರಾಣಿ, ಶಾಸಕ ಅರವಿಂದ ಬೆಲ್ಲದ್ ಹೆಸರುಗಳು ಮುಂಚೂಣಿಯಲ್ಲಿದೆ. ಲಿಂಗಾಯತ ಸಮುದಾಯವನ್ನು ಬಿಟ್ಟರೆ ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿ, ಸಿ.ಟಿ.ರವಿ ಹಾಗೂ ಡಾ.ಅಶ್ವತ್ಥ ನಾರಾಯಣ ಅವರ ಹೆಸರುಗಳು ಮುನ್ನಲ್ಲೆಗೆ ಬಂದಿವೆ.

ಮುಖ್ಯಮಂತ್ರಿ ಹುದ್ದೆಗೆ ತೆರೆ ಮರೆಯಲ್ಲಿ ಮುಖಂಡರು ಕಸರತ್ತು ನಡೆಸಿದ್ದರೂ, ಅಂತಿಮವಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತುಗಳೇ ಅಂತಿಮವಾಗಿದೆ. ಹೀಗಾಗಿ, ಮೋದಿ ಹಾಗೂ ಅಮಿತ್ ಶಾ ಕೃಪಾಕಟಾಕ್ಷ ಇರುವವರಿಗೇ ಮುಖ್ಯಮಂತ್ರಿ ಹುದ್ದೆ ಒಲಿಯುವುದು ನಿಶ್ಚಿತ. ಆ ಹಿನ್ನೆಲೆಯಲ್ಲಿ ವರಿಷ್ಟರನ್ನು ಭೇಟಿ ಮಾಡಿ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News