ಮಳೆ ಮುನ್ಸೂಚನೆ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ: ಸಚಿವ ಆರ್.ಅಶೋಕ್
ಬೆಂಗಳೂರು, ಜು. 23: `ರಾಜ್ಯದಲ್ಲಿ ಇನ್ನೂ ಮೂರು ದಿನಗಳು ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ, ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿಗಾ ಹಾಗೂ ಅಗತ್ಯ ಮುನ್ನಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕಾಳಜಿ ಕೇಂದ್ರಗಳನ್ನು ತೆರೆದು ವ್ಯವಸ್ಥೆ ಮಾಡುತ್ತಿದ್ದೇವೆ. ವಾಸ್ತವಿಕ ಮಳೆಗಿಂತ 10 ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದೆ. ಕಾಣೆಯಾದವರನ್ನು ಪತ್ತೆ ಹಚ್ಚುವುದಕ್ಕೆ ತಂಡಗಳನ್ನು ಕಳುಹಿಸಲಾಗಿದೆ. ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಕೃಷ್ಣಾ ನದಿಯಿಂದ ನೀರಿನ ಹೊರ ಹರಿವು ಜಾಸ್ತಿ ಆಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ನಿರ್ದೇಶನ ನೀಡಲಾಗಿದೆ' ಎಂದರು.
`ಈಗಾಗಲೇ ನಾಲ್ಕು ಎನ್ ಡಿಆರ್ ಎಫ್ ತಂಡಗಳನ್ನು ನಾಲ್ಕು ವಲಯಗಳಿಗೆ ಕಳುಹಿಸಿದ್ದೇವೆ. ಉತ್ತರಕನ್ನಡದಲ್ಲಿ ಇಬ್ಬರು ಕಾಣೆಯಾಗಿದ್ದು, ನದಿ ನೀರಲ್ಲಿ ಮುಳುಗಿದ್ದಾರೆ. 18 ತಾಲೂಕುಗಳಿಗೆ ಮಳೆಯಿಂದ ಎಫೆಕ್ಟ್ ಆಗಿದೆ. 131 ಗ್ರಾಮಗಳು ಮಳೆ ಪೀಡಿತವಾಗಿವೆ. ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಂದ ಹಾನಿಯಾಗಿರುವ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ' ಎಂದು ಅಶೋಕ್ ತಿಳಿಸಿದರು.
`ಈವರೆಗೆ ಮಳೆಯಿಂದ ಮೂವರು 3 ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. ಚಿಕ್ಕಮಗಳೂರು ಮನೆ ಕುಸಿತದಿಂದ ಓರ್ವ, ಉತ್ತರ ಕನ್ನಡದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈವರೆಗೆ 830 ಮನೆಗಳು ಹಾನಿಗೀಡಾಗಿವೆ. 8,733 ಜನರನ್ನು ಸ್ಥಳಾಂತರಿಸಲಾಗಿದೆ. 80 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ' ಎಂದು ಸಚಿವ ಅಶೋಕ್ ಇದೇ ವೇಳೆ ವಿವರ ನೀಡಿದರು.