ವ್ಯಕ್ತಿತ್ವ ವಿಕಸನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಸಚಿವ ಡಾ. ನಾರಾಯಣಗೌಡ
ಬೆಂಗಳೂರು, ಜು.23: ಕೊರೋನ ಎದುರಿಸಲು ಮಾನಸಿಕ ಧೈರ್ಯ ಮುಖ್ಯ. ಬಂಧುಬಳಗ ಕಳೆದುಕೊಂಡು ಆಘಾತಕ್ಕೊಳಗಾದವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಆಗಬೇಕು. ಪ್ರಾಥಮಿಕ ಮಾನಸಿಕ ಚಿಕಿತ್ಸೆ ನೀಡುವ ಬಗ್ಗೆ ಯುವ ಜನರಿಗೆ ತರಬೇತಿ ನೀಡುವ ಕಾರ್ಯ ನಿಮ್ಹಾನ್ಸ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.
ಶುಕ್ರವಾರ ನಿಮ್ಹಾನ್ಸ್ ಆವರಣದಲ್ಲಿ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆಗೆ ಕೌನ್ಸಿಲಿಂಗ್ ಸ್ಕಿಲ್ ಬಗ್ಗೆ ತರಬೇತಿ ನೀಡುವುದರಿಂದ ಎರಡು ರೀತಿಯ ಉಪಯೋಗ ಇದೆ. ಮಾನಸಿಕ ಆಘಾತಕ್ಕೆ ಒಳಗಾದವರಿಗೆ ತರಬೇತಿ ಪಡೆದವರು ಮಾನಸಿಕ ಧೈರ್ಯ ತುಂಬುವ ಕೆಲಸಮಾಡುತ್ತಾರೆ. ಇದರಿಂದ ಎಷ್ಟೋ ಜನರ ಬದುಕು ಬದಲಾಗುತ್ತದೆ. ಖಿನ್ನತೆಯಿಂದ ಹೊರಬಂದು ಉತ್ತಮ ಜೀವನ ಮಾಡಲು ಸಾಧ್ಯವಾಗುತ್ತದೆ ಎಂದರು.
ಯುವಜನತೆ ಇಂತಹ ಕಾರ್ಯಕ್ರಮದಲ್ಲಿ ತೊಡಗುವುದು ಬಹಳ ಉತ್ತಮ. ಯಾವುದೇ ಕೆಲಸ ಕಾರ್ಯ ಮಾಡದೆ ವ್ಯಸನಕ್ಕೆ ಒಳಗಾಗುತ್ತಾರೆ. ಅಂತಹವರನ್ನು ಗುರುತಿಸಿ ಈ ರೀತಿಯ ಕಾರ್ಯದಲ್ಲಿ ತೊಡಗುವಂತೆ ಮಾಡಬೇಕು. ನಿಮ್ಹಾನ್ಸ್ ಸಂಸ್ಥೆ ಹಮ್ಮಿಕೊಂಡಿರುವ ತರಬೇತಿ ಕಾರ್ಯ ಉತ್ತಮವಾದುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ನಾರಾಯಣಗೌಡ ತಿಳಿಸಿದರು.
ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಮಾತನಾಡಿ, ಮಾನಸಿಕ ಆರೋಗ್ಯಕ್ಕೆ ಮಹತ್ವ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಆಗತ್ತೆ. ಕೋವಿಡ್ ಸಂದರ್ಭದಲ್ಲಿ ಮಾನಸಿಕ ಚಿಕಿತ್ಸೆ ಅಗತ್ಯ. ಶೇ.70 ಕ್ಕಿಂತ ಹೆಚ್ಚು ಜನರಿಗೆ ಮಾನಸಿಕ ಚಿಕಿತ್ಸೆ ಸಿಗೋದೆ ಇಲ್ಲ. ಯುವ ಜನರಿಗೆ ಈ ಬಗ್ಗೆ ತರಬೇತಿ ನೀಡಿದಾಗ, ಸಾಕಷ್ಟು ಜನರಿಗೆ ಮಾನಸಿಕ ಚಿಕಿತ್ಸೆ ದೊರೆಯಲಿದೆ. ಕೌನ್ಸಿಲಿಂಗ್ ಸ್ಕಿಲ್ ಕಲಿಯುವುದು ಬಹಳ ಮುಖ್ಯ.
ಯುವಜನತೆಗೆ ಒತ್ತಡವನ್ನು ಹೇಗೆ ಎದುರಿಸುವುದು ಹೇಗೆ ಎಂದು ತಿಳಿದಿಲ್ಲ. ಆದರೆ ಕೌನ್ಸಿಲಿಂಗ್ ಸ್ಕಿಲ್ ನಿಂದ ಯುವ ಜನತೆಯ ಮನಃಪರಿವರ್ತನೆ ಸಾಧ್ಯ ಎಂದು ಹೇಳಿದರು. ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಯುವ ಜನರಿಗೆ ತರಬೇತಿ ನೀಡುವ ಗುರಿ ಇದೆ. ಎನ್ನೆಸೆ¸, ಯುವ ಸ್ಪಂದನ, ಯುವಜನ ಸಂಘ ಸೇರಿದಂತೆ ವಿವಿಧ ಸಂಘಗಳಲ್ಲಿರುವ ಯುವಕ-ಯುವತಿಯರಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಸ್ಸಾಂ ಸರ್ಕಾರದ ಕಂದಾಯ ಮಂಡಳಿ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಅರ್ಚನಾ ವರ್ಮ, ನಿಮ್ಹಾನ್ಸ್ ಕುಲಸಚಿವ ಡಾ.ಬಿ.ಎಸ್.ಶಂಕರನಾರಾಯಣ, ನಿಮ್ಹಾನ್ಸ್ ಪ್ರೊಪೆಸರ್ ಡಾ. ಪ್ರದೀಪ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.