ಚಿಕ್ಕಮಗಳೂರು: ಮಳೆ ಕ್ಷೀಣ; ಸಹಜಸ್ಥಿಯತ್ತ ಮರಳಿದ ಜನತೆ

Update: 2021-07-25 16:32 GMT

ಚಿಕ್ಕಮಗಳೂರು, ಜು.25: ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ಎಡಬಿಡದೇ ಸುರಿದ ಭಾರೀ ಮಳೆ ರವಿವಾರ ಕ್ಷೀಣಗೊಂಡಿದ್ದು, ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜಸ್ಥಿತಿಯತ್ತ ಮರಳಿದೆ. ಮಲೆನಾಡು ಹಾಗೂ ಬಯಲು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದ್ದು, ಉಳಿದಂತೆ ಬಿಸಿಲಿನ ವಾತಾವರಣ ಇತ್ತು. ಮಳೆ ಬಿಡುವು ನೀಡಿದ್ದರಿಂದ ರೈತರು ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.

ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಮುಂಗಾರು ಮಳೆಯ ಆರ್ಭಟ ಇತ್ತು. ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ನದಿಗಳ ನೆರೆ ನೀರು ಹೊಲ ಗದ್ದೆಗಳಿಗೆ ನುಗಿ ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿತ್ತು. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲಲ್ಲಿ ಮನೆಗಳು ಧರೆಗುರುಳಿದ್ದವು. ನಿರಂತರ ಮಳೆಯಿಂದ ರೋಸಿ ಹೋಗಿದ್ದ ಕಾಫಿನಾಡಿನ ಜನರು ಸದ್ಯ ಮಳೆ ಕ್ಷೀಣಿಸಿರುವ ಪರಿಣಾಮ ನಿಟ್ಟುಸಿರು ಬಿಟ್ಟಿದ್ದಾರೆ.

ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ತಾಲೂಕುಗಳಲ್ಲಿ ರವಿವಾರ ಬೆಳಗ್ಗೆ ಸಾಧಾರಣವಾಗಿ ಸುರಿದ ಮಳೆ ಸಂಜೆವರೆಗೂ ಬಿಡುವು ನೀಡಿದ್ದು, ಆಗಾಗ್ಗೆ ಬಿಸಿಲು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ ಕೆಲ ಹೊತ್ತು ತುಂತುರು ಮಳೆಯಾಗಿದ್ದು, ಉಳಿದಂತೆ ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು. ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆ ಸೇರಿದಂತೆ ಬಿಸಿಲಿನ ವಾತಾವರಣ ಇತ್ತು.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು, ಶಿರಾಡಿ ಘಾಟ್‍ನಲ್ಲಿ ವಾಹನಗಳ ಸಂಚಾರ ನಿಷೇದಿಸಿರುವುದರಿಂದ ದಕ್ಷಿಣ ಕನ್ನಡದತ್ತ ಸಂಚರಿಸುವ ವಾಹನಗಳು ಚಾರ್ಮಾಡಿ ಘಾಟ್‍ನಲ್ಲಿ ಸಂಚರಿಸುತ್ತಿರುವುದರಿಂದ ಘಾಟಿಯಲ್ಲಿ ವಾಹನಗಳ ಧಟ್ಟಣೆ ಹೆಚ್ಚಾಗಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಚಾರ್ಮಾಡಿ ಘಾಟ್‍ನಲ್ಲಿ ಕೆಲವೆಡೆ ಭೂ ಕುಸಿತ ಸಂಭವಿಸಿರುವುದರಿಂದ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸದ್ಯ ಮಲೆನಾಡಿನಲ್ಲಿ ಮಳೆ ಬಿಡುವು ನೀಡಿರುವುದರಿಂದ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಕಾಫಿ, ಅಡಿಕೆ ತೋಟಗಳಲ್ಲೂ ಗೊಬ್ಬರ, ದ್ರಾವಣ ಸಿಂಪಡಣೆಯಂತಹ ಕೃಷಿ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ.

ನಾಟಿ ಮಾಡಿದ್ದ ಭತ್ತ ಗದ್ದೆಗಳಲ್ಲಿ ಮರಳಿನ ರಾಶಿ; ಅಪಾರ ನಷ್ಟ

ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಹೇಮಾವತಿ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿದು, ನದಿಗಳ ನೆರೆ ನೀರು ಅಕ್ಕಪಕ್ಕದ ಭತ್ತದ ಗದ್ದೆಗಳಿಗೆ ಹರಿದು ಜಲಾವೃತಗೊಂಡಿದ್ದವು. ಪರಿಣಾಮ ನದಿಗಳ ಮರಳು ಭತ್ತದ ಗದ್ದೆಗಳಲ್ಲಿ ಸಂಗ್ರಹವಾಗಿದ್ದು, ನಾಟಿ ಮಾಡಿದ್ದ ಗದ್ದೆಗಳಲ್ಲಿ ಭತ್ತದ ಸಸಿಗಳ ಬದಲಾಗಿ ಮರಳಿನ ರಾಶಿ ಸಂಗ್ರಹವಾಗಿದೆ. ತಾಲೂಕಿನ ಭೈರಾಪುರ, ಹೊಸಕೆರೆ, ಊರುಬಗೆ ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳನ್ನು ನಾಟಿ ಮಾಡಿದ್ದು, ನಾಟಿ ಮಾಡಿದ್ದ ಗದ್ದೆಗಳಲ್ಲೀಗ ಮರಳಿನ ರಾಶಿ ಮಾತ್ರ ಉಳಿದಿದ್ದು, ಭತ್ತದ ಗದ್ದೆಗಳ ಮಾಲಕರು ಲಕ್ಷಾಂತರ ರೂ. ಖರ್ಚು ಮಾಡಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಹೊಸಕೆರೆ ಗ್ರಾಮದ ರೈತ ಲಿಂಗಪ್ಪ ಸೇರಿದಂತೆ ಇತರ ಸಂತ್ರಸ್ಥರು ಆಗ್ರಹಿಸಿದ್ದಾರೆ.

ಸಂಪೂರ್ಣವಾಗಿ ಕುಸಿದ ಮನೆ: ಪರಿಹಾರ ನೀಡಲು ನಿರ್ಲಕ್ಷ್ಯ; ದಂಪತಿ ಕಣ್ಣೀರು

ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಜಗನ್ನಾಥ್ ಹಾಗೂ ಸೀತಮ್ಮ ದಂಪತಿ ವಾಸವಿದ್ದ ಮನೆಯೊಂದು ಕಳೆದ ಭಾರಿ ಸಂಭವಿಸಿದ ಅತಿವೃಷ್ಟಿಗೆ ಭಾಗಶಃ ಹಾನಿಯಾಗಿತ್ತು. ಈ ಮನೆಗೆ ಕಳೆದ ಬಾರಿ ಸರಕಾರ 50 ಸಾವಿರ ರೂ. ಮಾತ್ರ ಪರಿಹಾರ ನೀಡಲಾಗಿದೆ.

ಹಾನಿಯಾದ ಮನೆ ವಾಸಯೋಗ್ಯವಾಗಿಲ್ಲದ ಪರಿಣಾಮ ದಂಪತಿ ಮನೆ ಸಮೀಪದಲ್ಲಿ ಸಣ್ಣ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಹಾನಿಯಾದ ಮನೆ ದುರಸ್ತಿಗೆ ಸರಕಾರ ನೀಡಿದ್ದ ಹಣದಲ್ಲಿ ಇಟ್ಟಿಗೆ ಖರೀದಿಸಿದ್ದರು. ಸದ್ಯ ಸುರಿದ ಮಳೆಗೆ ಭಾಗಶಃ ಹಾನಿಯಾಗಿದ್ದ ಮನೆ ಸಂಪೂರ್ಣವಾಗಿ ಕುಸಿದಿದ್ದು, ಕಂದಾಯಾಧಿಕಾರಿಗಳು ಈ ಮನೆಗೆ ಹಿಂದೆಯೇ 50 ಸಾವಿರ ರೂ. ಪರಿಹಾರ ನೀಡಿರುವುದರಿಂದ ಮತ್ತೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಸರಕಾರ ನೀಡಿದ್ದ 50 ಸಾವಿರ ರೂ. ಹಣದಲ್ಲಿ ಹೊಸ ಮನೆ ನಿರ್ಮಿಸಿಕೊಳ್ಳುವುದು ಹೇಗೆ ಎಂದು ಜಗನ್ನಾಥ್ ಹಾಗೂ ಸೀತಮ್ಮ ಅಳಲು ತೋಡಿಕೊಂಡಿದ್ದು, ಹೊಸ ಮನೆ ನಿರ್ಮಾಣಕ್ಕೆ ಸೂಕ್ತ ಪರಿಹಾರ ಕೊಡಿಸಿ ಎಂದು ಕಣ್ಣೀರಿಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News